ಹೊಸದಿಗಂತ ವರದಿ, ಕುಶಾಲನಗರ
ಭತ್ತದ ಹೊಟ್ಟಿನ ಮೂಟೆಗಳ ಅಡಿಯಲ್ಲಿ ಬೀಟೆ ಮರದ ನಾಟಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಲಾರಿಯೊಂದನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿ, ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕುಶಾಲನಗರ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಂಜರಾಯಪಟ್ಟಣದ ಬಳಿ ಶ್ರೀಮಂಗಲ ಕಡೆಯಿಂದ ಬರುತ್ತಿದ್ದ ಕೆಎ-19 ಎಎ-5272ರ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ 32 ಬೀಟೆ ನಾಟಾಗಳು ಪತ್ತೆಯಾಗಿದೆ.
ಲಾರಿ ಚಾಲಕ ಆರೋಪಿ ಅಬ್ದುಲ್ ಸಲೀಂ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಬೀಟೆ ನಾಟಾಗಳ ಮೌಲ್ಯ ರೂ.12 ಲಕ್ಷ ಹಾಗೂ ಲಾರಿಯ ಮೌಲ್ಯ ರೂ. 20 ಲಕ್ಷಗಳೆಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಟಿ.ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಕೆ.ಎಸ್.ಸುಬ್ರಾಯ, ಅರಣ್ಯ ರಕ್ಷಕ ರವಿ ಉತ್ನಾಳ, ವಾಹನ ಚಾಲಕ ವಾಸು ಹಾಗೂ ಎಂ.ಆರ್. ಸಿಬ್ಬಂದಿಗಳಾದ ಟಿ.ಟಿ.ಕುಶಾಲಪ್ಪ, ಆಲ್ಬರ್ಟ್ ಡಿ’ಸಾ ಮತ್ತು ಆರ್.ಆರ್.ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ