ಹೊಸದಿಗಂತ ವರದಿ ಮಂಡ್ಯ:
ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬಂದಲ್ಲಿ ಹಿಂದೂ, ಮುಸ್ಲೀಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರುವುದಿಲ್ಲ. ಇದು ಚರ್ಚೆಗೆ ಬಂದಾಗಲೆಲ್ಲಾ ವಿರೋಧಿಸುವವರೇ ಹೆಚ್ಚಾಗಿದ್ದಾರೆ ಎಂದು ಖ್ಯಾತ ಪತ್ರಕರ್ತ ವಿನಾಯಕ ಭಟ್ ಮೂರೂರು ಅಸಮಾಧಾನ ವ್ಯಕ್ತಪಡಿಸಿದರು.
ಚಿಂತಕರ ಚಾವಡಿ ವತಿಯಿಂದ ನಗರದ ಸರ್ವಬಣಜಿಗ (ಬಲಿಜಿಗರ ಸಂಘ) ಸಭಾಂಣದಲ್ಲಿ ನಡೆದ ಏಕರೂಪ ನಾಗರೀಕ ಸಂಹಿತೆ ಕುರಿತು ವಿಷಯ ಮಂಡಿಸಿ ಮಾತನಾಡಿದ ಅವರು, ದೇಶದಲ್ಲಿ ಜಾರಿಯಲ್ಲಿರುವ ಕ್ರಿಮಿನಲ್ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಕ್ರಿಮಿನಲ್ಗಳಿಗೆ ಜಾತಿ, ಧರ್ಮ ಭೇದವಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿ ಶಿಕ್ಷೆ ನೀಡಲಾಗುತ್ತದೆ. ಆದರೆ ವೈಯಕ್ತಿಕ ಕಾನೂನು, ಸಿವಿಲ್ ಕಾನೂನಿನಲ್ಲಿ ಮಾತ್ರ ಬದಲಾವಣೆ ಇದ್ದು, ಒಂದು ಧರ್ಮದವರಿಗೆ ಒಂದು ಕಾನೂನು ಮತ್ತೊಂದು ಧರ್ಮದವರಿಗೆ ಇನ್ನೊಂದು ಕಾನೂನು ಎಂಬಂತಾಗಿದೆ ಎಂದು ಹೇಳಿದರು.
ಇಂತಹ ಕಾನೂನುಗಳಿಂದಾಗಿ ಹಲವಾರು ಮಂದಿ ತೊಂದರೆಗೆ ಸಿಲುಕಿರುವ ಸಾಧ್ಯತೆಗಳು ಇದ್ದರೆ, ಮತ್ತೆ ಕೆಲವರು ಇದನ್ನು ಲಾಭಕ್ಕಾಗಿ ಬಳಸುಕೊಳ್ಳುವವರು ಇದ್ದಾರೆ. ಹಿಂದೂ ವಿವಾಹ ಕಾಯ್ದೆ, ಮುಸ್ಲೀಂ ವಿವಾಹ ಕಾನೂನು ಹೀಗೆ ಆಯಾ ಧರ್ಮಕ್ಕೆ ಅವರದ್ಧೇ ಆದ ಕಾನೂನುಗಳು ಇರುವುದರಿಂದ ಕೆಲವರಿಗೆ ಅನುಕೂಲವಾದರೆ, ಮತ್ತೆ ಕೆಲವರಿಗೆ ಅನಾನುಕೂಲವೂ ಆಗಿದೆ ಎಂದು ಪ್ರತಿಪಾದಿಸಿದರು.
ಏಕರೂಪ ನಾಗರೀಕತೆ ಜಾರಿಗೆ ಬಂದಲ್ಲಿ ಈ ಕಾಯ್ದೆಯ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ವಿರೋಧಿಗಳ ವಾದವಾಗಿದೆ. ಆದ್ದರಿಂದಲೇ ಈ ಕಾನೂನು ತಿರುಗುಬಾಣವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಂತರ ಧರ್ಮೀಯ ಮದುವೆಗಳೂ ಕಡಿಮೆ ಆಗಬಹುದು ಎಂಬ ಆತಂಕವನ್ನೂ ಹಾರ ಹಾಕುತ್ತಿದ್ದಾರೆ ಎಂದು ತಿಳಿಸಿದರು.