ಹೊಸದಿಗಂತ ಡಿಜಿಟಲ್ ಡೆಸ್ಕ್:
ಹತ್ಯೆ ಮಾಡಲು ಕರೆ ನೀಡುವ ಸಚಿವರನ್ನುಸಂಪುಟದಿಂದ ಕಿತ್ತುಹಾಕಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah) ರಾಜ್ಯಪಾಲರಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವಿಟ್ ( Twitter ) ಮಾಡಿರುವ ಅವರು, ಜನತೆಯ ಮಾನ-ಪ್ರಾಣ ರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ. ಇಂತಹ ಸಚಿವರು ತಾವೇ ಖುದ್ದಾಗಿ ಹತ್ಯೆಗೆ ಪ್ರಚೋದಿಸಿದರೆ? ಅಶ್ವತ್ಥನಾರಾಯಣ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆ ಇರುತ್ತದೆ? ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೊಲೆಗಡುಕ ಮನಸ್ಥಿತಿಯ ಅಶ್ವತ್ಥನಾರಾಯಣ ಅಂತಹವರು ಸಾರ್ವಜನಿಕ ಜೀವನದಲ್ಲಿ ಇರಲಿಕ್ಕೆ ನಾಲಾಯಕ್. ಇಂತಹವರು ಉನ್ನತ ಶಿಕ್ಷಣ ಸಚಿವರಾದರೇ? ಬಿಜೆಪಿ ಸಮಾಜಕ್ಕೆ ಯಾವ ಸಂದೇಶ ಕೊಡಲಿಕ್ಕೆ ಹೊರಟಿದೆ? ಎಂದು ಕೇಳಿದ್ದಾರೆ.ಬಿಜೆಪಿಯ ಹೊಡಿ, ಬಡಿ ಸಂಸ್ಕೃತಿಯೇ ಅವರ ಬೌದ್ಧಿಕ ದಿವಾಳಿತನದ ಪ್ರತೀಕ. ಸೈದ್ಧಾಂತಿಕವಾಗಿ ನನ್ನನ್ನು ಎದುರಿಸುವ, ಇಲ್ಲವೇ ಸಾಧನೆಯ ಆಧಾರದಲ್ಲಿ ಮತ ಕೇಳುವ ಧಮ್-ತಾಕತ್ ಅವರಿಗೆ ಇಲ್ಲ. ಬಿಜೆಪಿ ಅವರದು ಶೂನ್ಯ ಸಾಧನೆ ಮತ್ತು ಪೊಳ್ಳು ಸಿದ್ಧಾಂತ ಎಂದು ಕಿಡಿಕಾರಿದ್ದಾರೆ.
ಸೈದ್ಧಾಂತಿಕವಾಗಿ ಎದುರಿಸಲಾಗದ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರನ್ನು ಗೋಡ್ಸೆ ಕೊಂದ. ಅದೇ ಗೋಡ್ಸೆ ಸಂತಾನವೇ ವಿದ್ವಾಂಸರಾಗಿದ್ದ ಎಂ.ಎಂ.ಕಲಬರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಎಂದು ಕಿಡಿಕಾರಿದ್ದಾರೆ.
ಸಾವಿನ ಭಯ ನನಗಿಲ್ಲ. ಇಂತಹ ಕೊಲೆಗಡುಕ ಮನಸ್ಥಿತಿಯವರು ಅಧಿಕಾರದಲ್ಲಿದ್ದರೆ ರಾಜ್ಯದ ಯಾವುದೇ ವ್ಯಕ್ತಿ ಸುರಕ್ಷಿತನಲ್ಲ. ಸೋಲಿನ ಭಯದಿಂದ ತತ್ತರಿಸಿಹೋಗಿರುವ ಈ ಕೊಲೆಗಡುಕ ಮನಸ್ಸುಗಳು ಗೆಲುವಿಗಾಗಿ ಯಾರ ಹತ್ಯೆಯನ್ನೂ ಮಾಡಬಹುದು. ಈ ಬಗ್ಗೆ ಜನ ಎಚ್ಚರಗೊಳ್ಳಬೇಕು ಎಂದು ತಿಳಿಸಿದ್ದಾರೆ.