ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂನ ಖ್ಯಾತ ನಿರ್ದೇಶಕ ಹಾಗೂ ಛಾಯಾಗ್ರಾಹಕ ಶಾಜಿ ಎನ್ ಕರುಣ್ ಅವರು ವಿಧಿವಶರಾಗಿದ್ದಾರೆ .
ಪಿರವಿ (1988), ಸ್ವಾಹಂ (1994), ವಾನಪ್ರಸ್ಥಂ (1999), ಮತ್ತು ಕುಟ್ಟಿ ಸ್ರ್ಯಾಂಕ್ (2009) ಚಿತ್ರಗಳ ನಿರ್ದೇಶನದಿಂದ ಅವರು ಹೆಚ್ಚು ಪ್ರಸಿದ್ಧಿಯಾಗಿದ್ದರು. ಅವರ ಚೊಚ್ಚಲ ಚಿತ್ರ ಪಿರವಿಯ ಅತ್ಯುತ್ತಮ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿತ್ತು. ಮತ್ತು 1989 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಮನ್ನಣೆ ಪಡೆದಿತ್ತು.
ವಾನಪ್ರಸ್ಥಂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸಿತ್ತು. ನಿಧನದ ವೇಳೆ ಅವರು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
1952 ರಲ್ಲಿ ಕೊಲ್ಲಂನಲ್ಲಿ ಜನಿಸಿದ ಶಾಜಿ, ಸಾಂಸ್ಕೃತಿಕ ಶ್ರೀಮಂತಿಕೆಯ ಮನೆತನದಲ್ಲಿ ಬೆಳೆದರು. ಅವರ ತಂದೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸಾಹಿತ್ಯ ಮತ್ತು ಶಾಸ್ತ್ರೀಯ ಕಲೆಗಳ ಮೇಲೆ ವಿಶೇಷ ಒಲವು ಬೆಳೆಸಿದ್ದರು. ಅವರು ಪತ್ನಿ ಅನಸೂಯಾ ವಾರಿಯರ್ ಮತ್ತು ಪುತ್ರರಾದ ಅನಿಲ್ ಮತ್ತು ಅಪ್ಪು ಅವರನ್ನು ಅಗಲಿದ್ದಾರೆ.