ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ದರ್ಶನ್ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇತ್ತ ಪ್ರಕರಣದ ಆರೋಪಿ ಸಂಖ್ಯೆ 8ರ ಬಂಧನ ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಆರೋಪಿ ಸಂಖ್ಯೆ 8 ರವಿ, ಚಿತ್ರದುರ್ಗದ ಕಾರು ಚಾಲಕನಾಗಿದ್ದು, ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದ ಕಾರನ್ನು ಓಡಿಸಿದ್ದು ಈತನೇ, ಈತನ ಟೊಯೊಟಾ ಇಟಿಯಾಸ್ ಕಾರಿನಲ್ಲಿಯೇ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆ ಶೆಡ್ಗೆ ಕರೆತರಲಾಗಿತ್ತು. ಜೂನ್ 14 ರಂದು ಈತ ಚಿತ್ರದುರ್ಗದಲ್ಲಿ ಪೊಲೀಸರ ಮುಂದೆ ಶರಣಾಗಿದ್ದ. ಇದೀಗ ರವಿ ಬಂಧನದ ವಿರುದ್ಧ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬಂಧನಕ್ಕೆ ಕಾರಣಗಳನ್ನು ತಿಳಿಸಿಲ್ಲ, ಆರೋಪಿಗೆ ಅಥವಾ ಆರೋಪಿಯ ಪರ ವಕೀಲರಿಗೆ ರಿಮ್ಯಾಂಡ್ ಅರ್ಜಿಯನ್ನು ಸಹ ನೀಡಿಲ್ಲ. ಈ ಪ್ರಕರಣದಲ್ಲಿ ತಾಂತ್ರಿಕ ದೋಷಗಳಿರುವ ಕಾರಣ ಈ ಬಂಧನವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ದರ್ಶನ್ ಪರ ವಕೀಲ ರಂಗನಾಥ್,ಪ್ರಕರಣದಲ್ಲಿ ಆರೋಪಿ 8ರ ಬಂಧನದ ಬಗ್ಗೆ ಆರೋಪಿಗೆ ಮಾಹಿತಿ ನೀಡಿಲ್ಲ, ಸಾಕಷ್ಟು ಕಾನೂನುಗಳನ್ನು ಪಾಲಿಸಲಾಗಿಲ್ಲ. ಹಾಗಾಗಿ ನಾವು ಬಂಧನ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದೇವೆ. ಒಂದೊಮ್ಮೆ ರಿಟ್ ಅರ್ಜಿಯನ್ನು ಮಾನ್ಯ ಹೈಕೋರ್ಟ್ ಮಾನ್ಯ ಮಾಡಿದರೆ ಅದರಿಂದ ಪ್ರಕರಣದ ಇತರೆ ಆರೋಪಿಗಳಿಗೂ ಒಳಿತಾಗಲಿದೆ. ಅದರ ಪ್ರಭಾವ ಇತರೆ ಆರೋಪಿಗಳ ಬಂಧನದ ಮೇಲೆ ಸಹ ಬೀರಲಿದೆ ಎಂದಿದ್ದಾರೆ.
ನಮ್ಮ ರಿಟ್ ಅರ್ಜಿಯು ಇನ್ನು ಎರಡು-ಮೂರು ದಿನಗಳಲ್ಲಿ ವಿಚಾರಣೆಗೆ ಬರಬಹುದು , ಹೈಕೋರ್ಟ್ ಪುರಸ್ಕೃತಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.