ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಸೋಮವಾರದ ಬೆಳಿಗ್ಗೆ 11.30ಕ್ಕೆ ಮುಂದೂಡಿಕೆ ಮಾಡಿದೆ.
ಹೀಗಾಗಿ ನ್ಯಾಯಾಂಗ ಬಂಧನದಲ್ಲಿರುವ ರೇವಣ್ಣಗೆ 3 ದಿನ ಜೈಲೇ ಗತಿಯಾದಂತೆ ಆಗಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತ್ತು. ಈ ವೇಳೆ ರೇವಣ್ಣಗೆ ಸದ್ಯಕ್ಕೆ ಜಾಮೀನು ನೀಡದಂತೆ ಎಸ್ಐಟಿ ಪರ ಎಸ್ ಪಿಪಿ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಕೋರ್ಟ್ ಮುಂದೆ ಎಸ್ಐಟಿಯ ಎಸ್ ಪಿಪಿ ಜಾಯ್ನಾ ಕೋಥಾರಿ ಅವರು ವಾದ ಮಂಡಿಸಿ, ಜಾಮೀನು ಅರ್ಜಿಗೆ ನಾವು ಆಕ್ಷೇಪಣೆ ಸಲ್ಲಿಸುತ್ತಿರುವುದರ ಹಿಂದೆ ವಿಳಂಬದ ಉದ್ದೇಶವಿಲ್ಲ. ನಮ್ಮ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು ಎಂಬುದಾಗಿ ಕೋರಿದರು.
ಈ ವೇಳೆ ನ್ಯಾಯಪೀಠವು ಜಾಮೀನು ಅರ್ಜಿ ವಿಚಾರಣೆಗೆ ಕಾಲಾವಕಾಶ ನೀಡುವುದಿಲ್ಲ. ಬೇರೆ ಪ್ರಕರಣಗಳಲ್ಲಿ ನಾವು ಕಾಲಾವಕಾಶ ನೀಡಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ ಎಂಬುದಾಗಿ ಸ್ಪಷ್ಟ ಪಡಿಸಿತು.
ಈ ಬಳಿಕ ಹೆಚ್.ಡಿ ರೇವಣ್ಣ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.