ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಹೊಳೆನರಸೀಪುರ ಕಾಲೇಜಿನಲ್ಲಿ ಎಂಎಸ್ಸಿ ಮನೋವಿಜ್ಞಾನ ಮತ್ತು ಎಂಎಸ್ಸಿ ಆಹಾರ ವಿಜ್ಞಾನ ಕೋರ್ಸು ಆರಂಭಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಏಕಾಂಗಿ ಧರಣಿ ಆರಂಭಿಸಿದ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪರಿಶೀಲಿಸುವ ಭರವಸೆ ನೀಡಿದ್ದಾರೆ. ಇದರಿಂದ ಧರಣಿಯನ್ನು ಕೈಬಿಡಲಾಗಿದೆ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹೊಳೆನರಸೀಪುರ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್ಗೆ ಅನುಮತಿ ಕೊಡಲಾಗಿತ್ತು. ಮೈಸೂರು ವಿವಿಯಿಂದ ಅನುಮತಿ ಕೊಡಲಾಗಿತ್ತು. ಆದರೆ ಈಗಿನ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಅವರು ಇದನ್ನು ರದ್ದು ಮಾಡಿದ್ದಾರೆಂದು ಆರೋಪಿಸಿ, ಬೆಳಗ್ಗೆಯಿಂದಲೇ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಪ್ರತಿಭಟನೆ ಆರಂಭಿಸಿದ್ದರು. ವಿಷಯ ತಿಳಿಸಿದ ಮುಖ್ಯಮಂತ್ರಿಗಳು, ಎಚ್.ಡಿ.ರೇವಣ್ಣ ಅವರನ್ನು ದೂರವಾಣಿ ಕರೆಯ ಮೂಲಕ ಸಂಪರ್ಕಿಸಿ, ಪ್ರತಿಭಟನೆ ಕೈ ಬಿಡುವಂತೆ ಹಾಗೂ ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು. ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಎಚ್.ಡಿ.ರೇವಣ್ಣ ಪ್ರತಿಭಟನೆಯಿಂದ ಹಿಂದೆ ಸರಿದರು.