ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಾನಾ ವಿಚಾರಗಳಲ್ಲಿ ಸುದ್ದಿಯಲ್ಲಿದ್ದು, ಇದರಸಾಲಿಗೆ ಇದೀಗ ರಾಜಕಾರಣವೂ ಸೇರಿದೆ.
ಅದೇನೇದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಿಷಬ್ ಸ್ಪರ್ಧಿಸಲಿದ್ದಾರೆ ಎನ್ನುವ ಮಾತೂ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿತ್ತು. ಎರಡು ಪ್ರಮುಖ ರಾಜಕೀಯ ಪಕ್ಷಗಳು ಅವರೊಂದಿಗೆ ಚರ್ಚೆ ಮಾಡಿವೆ ಎಂದೂ ಹೇಳಲಾಗಿತ್ತು.
ಇದೀಗ ಈ ಎಲ್ಲ ಪ್ರಶ್ನೆಗಳಿಗೂ ಸ್ವತಃ ರಿಷಬ್ ಶೆಟ್ಟಿ ಅವರೇ ಉತ್ತರಿಸಿದ್ದಾರೆ.‘ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಸಮಾಜಸೇವೆಗೆ ರಾಜಕಾರಣವೇ ಆಗಬೇಕಿಲ್ಲ’ ಎಂದು ಉತ್ತರಿಸಿದ್ದಾರೆ. ಈ ಮೂಲಕ ರಾಜಕಾರಣದ ಒಲವಿನ ಬಗ್ಗೆ ರಿಷಬ್ ಅಲ್ಲಗಳೆದಿದ್ದಾರೆ. ರಾಜಕಾರಣಕ್ಕೆ ಸಂಬಂಧಿಸಿದ ವಿಷಯಗಳು ತಮಗೂ ತಲುಪಿರುವ ಕುರಿತೂ ಅವರು ಮಾತನಾಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನೀವು ಎಲ್ಲಿರುತ್ತೀರಿ? ಎಂದು ಕೇಳಲಾದ ಪ್ರಶ್ನೆಗೂ ಅವರು ಉತ್ತರಿಸಿದ್ದು, ‘ಕಾಂತಾರ ಸಿನಿಮಾದ ಕೆಲಸದಲ್ಲಿ ಇರುವೆ. ಮತದಾನ ನಮ್ಮೆಲ್ಲರ ಹಕ್ಕು. ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವೆ’ ಎಂದರು . ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಇದೆಲ್ಲ ಕಪೋಕಲ್ಪಿತ ಮಾತು ಎಂದು ಅವರು ಹೇಳಿದರು.