ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದಲ್ಲಿ ಹಿಂದು ದೇವಾಲಯಗಳ ಮೇಲಿನ ದಾಳಿಯ ಇನ್ನೊಂದು ಘಟನೆ ನಡೆದಿದ್ದು ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂಫೋಬಿಯಾ ವಿಷಯವು ದೇಶದ ಹೌಸ್ ಆಫ್ ಕಾಮನ್ಸ್ನಲ್ಲಿ ಪ್ರಸ್ತಾಪಿತವಾಗಿದೆ. ಸೋಮವಾರ ಗ್ರೇಟರ್ ಟೊರೊಂಟೊ ಏರಿಯಾದ (ಜಿಟಿಎ) ಬ್ರಾಂಪ್ಟನ್ ಪಟ್ಟಣದಲ್ಲಿರುವ ಗೌರಿ ಶಂಕರ ಮಂದಿರವನ್ನು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಈ ವಿಷಯವು ಕೆನಡಾದ ಸಂಸತ್ತಿನಲ್ಲಿ ಪ್ರಸ್ತಾಪಿಸಲ್ಪಟ್ಟಿದೆ
ಸಂಸತ್ತಿನಲ್ಲಿ ಬುಧವಾರ ಈ ವಿಷಯವನ್ನು ಉದ್ದೇಶಿಸಿ ಮಾತನಾಡಿದ ಆಡಳಿತಾರೂಢ ಲಿಬರಲ್ ಪಕ್ಷದ ಸಂಸದ ಚಂದ್ರ ಆರ್ಯ, ಕೆನಡಾ ಸರ್ಕಾರವು “ಈ ಆತಂಕಕಾರಿ ಪ್ರವೃತ್ತಿಯನ್ನು ಗಂಭೀರವಾಗಿ ಗಮನಿಸಿ ಸೂಕ್ತವಾಗಿ ಪ್ರತಿಕ್ರಿಯಿಸುವಂತೆ” ಕರೆ ನೀಡಿದ್ದಾರೆ.
ಬ್ರಾಂಪ್ಟನ್ ದೇವಾಲಯದ ಧ್ವಂಸವನ್ನು “ದ್ವೇಷದ ಅಪರಾಧ” ಎಂದು ವಿವರಿಸಿದ ಆರ್ಯ “ಇತ್ತೀಚಿನ ದಿನಗಳಲ್ಲಿ ಕೆನಡಾದಲ್ಲಿ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಗುಂಪುಗಳಿಂದ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ಅನೇಕ ದಾಳಿಗಳಲ್ಲಿ ಇದು ಒಂದು. ಹಿಂದೂ ಕೆನಡಿಯನ್ನರು ಹೆಚ್ಚುತ್ತಿರುವ ಹಿಂದೂಫೋಬಿಯಾದಿಂದಾಗಿ ಅದೇ ನೋವನ್ನು ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಜುಲೈ 2022 ರಲ್ಲಿ ರಿಚ್ಮಂಡ್ ಹಿಲ್ನಲ್ಲಿರುವ ವಿಷ್ಣು ಮಂದಿರದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಇದೇ ರೀತಿ ವಿರೂಪಗೊಳಿಸಲಾಗಿತ್ತು. ಇದು ಈ ರೀತಿಯ ಮೂರನೇ ಘಟನೆಯಾಗಿದೆ.