ದಿಗಂತ ವರದಿ ಬಳ್ಳಾರಿ:
ಉತ್ತರಪ್ರದೇಶ, ತೆಲಂಗಾಣ, ಆಂದ್ರಪ್ರದೇಶ ಸೇರಿ ನಾನಾ ರಾಜ್ಯಗಳಿಂದ ಬಳ್ಳಾರಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ರೂಂ ನೀಡಿರುವ ಆರೋಪ ಹಿನ್ನೆಲೆ ಒಟ್ಟು 24 ಲಾಡ್ಜ್ ಮಾಲೀಕರ ವಿರುದ್ಧ ತಹಸೀಲ್ದಾರ್ ರು ದೂರು ದಾಖಲಿಸಿದ್ದಾರೆ.
ನಾನಾ ರಾಜ್ಯಗಳಿಂದ ನರ್ಸಿಂಗ್ ಪರೀಕ್ಷೆಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿರುವ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಗರದ ವಿವಿಧ ಲಾಡ್ಜ್ ಗಳ ಮಾಲೀಕರು ಉಳಿದುಕೊಳ್ಳಲು ರೂಂ ಪಡೆದುಕೊಂಡಿದ್ದರು. ಮಹಾ ಹೆಮ್ಮಾರಿ ಕೊರೊನಾ ನೆಗೆಟಿವ್ ವರದಿ, ಎರಡು ಡೋಸ್ ಲಸಿಕೆ ಪಡೆದ ಸರ್ಟಿಫಿಕೇಟ್ ಇಲ್ಲದಿದ್ದರೂ ಲಾಡ್ಜ್ ಗಳ ಮಾಲೀಕರು ರೂಂ ಕೊಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಹಸಿಲ್ದಾರರು ಲಾಡ್ಜ್ ಮಾಲೀಕರ ವಿರುದ್ದ ದೂರು ನೀಡಿದ್ದಾರೆ.
ಇದರ ಜೊತೆಗೆ 68 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿರುವುದು ಆಘಾತಕಾರಿ ವಿಷಯವಾಗಿದೆ. ಹೊರ ರಾಜ್ಯದಿಂದ ಯಾರೇ ಇರಲಿ ಆಗಮಿಸುವರ ಮೇಲೆ ಹದ್ದಿನ ಕಣ್ಣಿಡಬೇಕು, ಯಾವುದೇ ಕಾರಣಕ್ಕೂ ಸರ್ಟಿಫಿಕೇಟ್ ಇಲ್ಲದೇ ಪ್ರವೇಶ ನೀಡದೇ ಪ್ರವೇಶ ನಿಷೇಧಿಸಬೇಕು, ಬಳ್ಳಾರಿಗೆ ಹೊರ ರಾಜ್ಯದಿಂದ ಯಾರೇ ಬರಲಿ ಅವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎನ್ನುವ ನಿಯಮವಿದೆ. ಈ ನಿಯಮವನ್ನು ಉಲ್ಲಂಘಿಸಿದ ಹಿನ್ನೆಲೆ ಇಲ್ಲಿನ ಗಾಂಧಿನಗರ, ಬ್ರೂಸ್ ಪೇಟೆ, ಬಳ್ಳಾರಿ ರೂರಲ್ ಹಾಗೂ ಕೌಲ್ ಬಜಾರ್ ಪೊಲೀಸ್ ಠಾಣೆಗಳಲ್ಲಿ 24 ಲಾಡ್ಜ್ಗಳ ಮಾಲೀಕರ ವಿರುದ್ಧ ತಹಸೀಲ್ದಾರ್ ರೆಹಮಾನ್ ಪಾಷಾ ಅವರು ಪ್ರಕರಣ ದಾಖಲಿಸಿದ್ದಾರೆ.