ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಯಶಸ್ವಿಯಾಗಿದೆ. ಗುಜರಾತ್ ಎಟಿಎಸ್ನ ಮಹತ್ವದ ಮಾದರಿಯನ್ನು ಆಧರಿಸಿ, ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮೊಹಮದ್ ನಯಾಜಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದೆ.
ನಿಷೇಧಿತ ಸಂಘಟನೆಯಾಗಿರುವ ಪಿಎಎಫ್ಐನ ಸದಸ್ಯನಾಗಿದ್ದ ಮೊಹಮದ್ ಗೌಸ್, ಘಟನೆ ಆದ ಬಳಿಕ ತಲೆಮರೆಸಿಕೊಂಡಿದ್ದರು. ಆದರೆ, ಗುಜರಾತ್ ಎಟಿಎಸ್ ಈತನನ್ನು ಟ್ರ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಇರುವ ಬಗ್ಗೆ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ರವಾನಿಸಿತ್ತು. ಇದರಿಂದಾಗಿ 8 ವರ್ಷದ ಬಳಿಕ ರಾಜ್ಯ ಸರ್ಕಾರದ ಪಾಲಿಗೆ ತಲೆನೋವಾಗಿದ್ದ ಪ್ರಕರಣದಲ್ಲಿ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.
ಆರೋಪಿಯನ್ನು ಮೊಹಮ್ಮದ್ ಗೌಸ್ ನಯಾಜಿ ಎಂದು ಗುರುತಿಸಲಾಗಿದೆ. ದಕ್ಷಿಣ ಆಫ್ರಿಕಾದಿಂದ ಈತನನ್ನು ಭಾರತಕ್ಕೆ ಗಡಿಪಾರು ಮಾಡಿದ ಬಳಿಕ ಮುಂಬೈನಲ್ಲಿ ಎನ್ಐಎ ಅಧಿಕಾರಿಗಳು ಘೌಸ್ ಅವರನ್ನು ಬಂಧಿಸಿದ್ದಾರೆ.
ಪಿಎಫ್ಐ ನ ಕರ್ನಾಟಕ ಪಿಎಫ್ಐ ಅಧ್ಯಕ್ಷ ಮೊಹಮದ್ ಶಾಕಿಬ್ ಸೇರಿ 8 ಜನ ಈ ಪ್ರಕರಣದಲ್ಲಿ ಬಂಧಿತರಾಗಿದ್ದರು. ಇನ್ನು ಮೊಹಮದ್ ಗೌಸ್, ಪಿಎಫ್ಐನ ಸೌತ್ ಇಂಡಿಯಾ ಅಧ್ಯಕ್ಷನಾಗಿದ್ದ. ಮೊಹಮ್ಮದ್ ಗೌಸ್ ನಯಾಜಿ ವಿರುದ್ಧ ಹಲವು ಕೇಸ್ ಗಳು ಇದ್ದವು. 2014 ರಲ್ಲಿ ಮುಂಬೈ ಗಲಭೆ ಪ್ರಕರಣದ ಆರೋಪಿಯಾಗಿದ್ದ ಎಂದು ಎನ್ಐಎ ತಿಳಿಸಿದೆ.
ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ ಮೊಹಮದ್ ಗೌಸ್, 2016ರಲ್ಲಿ ಬೆಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡ ಆರ್. ರುದ್ರೇಶ್ರನ್ನು ಸಂಚು ರೂಪಿಸಿ ಹತ್ಯೆಗೈದಿದ್ದರು. 35 ವರ್ಷದ ರುದ್ರೇಶ್ ಆರ್ ಆರ್ ಎಸ್ ಎಸ್ ನ ಶಿವಾಜಿನಗರ ಶಾಖೆಯ ಮಂಡಲಾಧ್ಯಕ್ಷ ಹಾಗೂ ಶಿವಾಜಿನಗರ ಬಿಜೆಪಿಯ ಕಾರ್ಯದರ್ಶಿಯೂ ಆಗಿದ್ದರು.
ಘಟನೆಯ ನಂತರ, ಮೊಹಮದ್ ಗೌಸ್ ನಯಾಜಿ ದೇಶದಿಂದ ಪರಾರಿಯಾಗಿ ವಿದೇಶದಲ್ಲಿ ವಿವಿಧ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದನು. ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಐದು ಲಕ್ಷ ರೂಪಾಯಿ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು.