ಸುರಕ್ಷತಾ ತಪಾಸಣೆ: ಸೆ.29ರಂದು ಮೆಟ್ರೋ ಸೇವೆಯಲ್ಲಿ ವ್ಯತ್ಯಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೆಟ್ರೋ ರೈಲು ನಿಗಮವು ಸೆ.29ರಂದು ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಕೆಆರ್ ಪುರ ಗರುಡಾಚಾರ್ ಪಾಳ್ಯವರೆಗೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ನಮ್ಮ ಮೆಟ್ರೊ ಮಾರ್ಗಗಳ ಪೈಕಿ ನೇರಳೆ ಮಾರ್ಗದ ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗವನ್ನು ಅಧಿಕಾರಿಗಳು ಶುಕ್ರವಾರ ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. ಈ ಕಾರಣದಿಂದ ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಇಡೀ ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ನಮ್ಮ ಮೆಟ್ರೊ ಪ್ರಕಟಣೆ ಹೊರಡಿಸಿದೆ.

ಉಳಿದಂತೆ ಗರುಡಾಚಾರ್‌ಪಾಳ್ಯದಿಂದ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ವರೆಗೆ ಮೆಟ್ರೋ ನಿಲ್ದಾಣಗಳ ಮಧ್ಯೆ ಮಾತ್ರ ರೈಲು ಸೇವೆ ಪೂರ್ಣ ದಿನ ಲಭ್ಯವಿದ್ದು, ಇತರ ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಬೇಕೆಂದು ಕೋರಿದೆ.

ಕೆಂಗೇರಿಯಿಂದ ಚಲ್ಲಘಟ್ಟ ವರೆಗಿನ ತಪಾಸಣೆ ಪ್ರಯುಕ್ತ ಮೈಸೂರು ರಸ್ತೆಯಿಂದ ಕೆಂಗೇರಿ ವರೆಗಿನ ಮಾರ್ಗದಲ್ಲಿ ಸಂಚಾರ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!