ಹೊಸದಿಗಂತ ಬೆಳಗಾವಿ:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಯಡೂರಿನ ವೀರಭದ್ರೇಶ್ವರ ಕಾಡಸಿದ್ದೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ ಬೃಹತ್ ವಿದ್ಯಾರ್ಥಿ ಯುವ ಸಮಾವೇಶದಲ್ಲಿ ಆರ್ಎಸ್ಎಸ್ ಸರಸಂಘ ಚಾಲಕ್ ಡಾ.ಮೋಹನ್ ಭಾಗವತ್ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ವಿಶೇಷವಾಗಿ, ಶ್ರೀಶೈಲ ಜಗದ್ಗುರುಗಳಾದ ಚನ್ನರಾಮಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಡಾ.ಮೋಹನ್ ಭಾಗವತ್ ಅವರಿಗೆ ಭಕ್ತಿಪೂರ್ವಕ ತುಲಾಭಾರ ಸೇವೆ ನೆರವೇರಿಸಲಾಯಿತು. ಈ ತುಲಾಭಾರವು ಕೇವಲ ಸಾಂಪ್ರದಾಯಿಕವಾಗಿರದೆ, ಗೋವುಗಳಿಗೆ ನೀಡುವ ಪೌಷ್ಟಿಕ ಆಹಾರ ಪದಾರ್ಥಗಳಿಂದ ಮಾಡುವ ಮೂಲಕ ಗಮನ ಸೆಳೆಯಿತು.
ತುಲಾಭಾರದ ನಂತರ ಮೋಹನ್ ಭಾಗವತ್ ಅವರು ಮಠದ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ತಿನ್ನಿಸಿ, ಗೋ ಪೂಜೆ ನೆರವೇರಿಸುವ ಮೂಲಕ ಪ್ರಾಣಿ ದಯೆ ಮತ್ತು ಗೋ ರಕ್ಷಣೆಯ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮಠದ ಭಕ್ತರು, ವಿದ್ಯಾರ್ಥಿಗಳು ಹಾಗೂ ಸಂಘದ ಪ್ರಮುಖರು ಉಪಸ್ಥಿತರಿದ್ದರು.



