ಹೊಸದಿಗಂತ ವರದಿ, ಮಡಿಕೇರಿ:
ಗಾಂಜಾ ಮಾರಾಟ ಮತ್ತು ಖರೀದಿ ವ್ಯವಹಾರದಲ್ಲಿ ತೊಡಗಿದ್ದ ಮೂವರನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಅಂಬಟ್ಟಿ ಗ್ರಾಮದ ಕೆ. ಹೆಚ್. ನಿಜಾಮುದ್ದಿನ್, ಬಿಟ್ಟಂಗಾಲದ ಪಿ. ಡಿ. ಸೋಮಯ್ಯ ಅಲಿಯಾಸ್ ರೋಷನ್ ಮತ್ತು ಪಿ. ಸಿ. ಕವನ್ ಮಾದಯ್ಯ ಬಂಧಿತ ಆರೋಪಿಗಳು.
ವೀರಾಜಪೇಟೆ ಪಂಜರುಪೇಟೆಯ ಗಣಪತಿ ಬೀದಿಯಿಂದ ನಿಸರ್ಗ ಲೇಔಟ್ ಕಡೆಗೆ ತೆರಳುವ ರಸ್ತೆಯಲ್ಲಿರುವ ಪಾಪಣ್ಣ ಅವರ ಮರದ ಮಿಲ್ ಹತ್ತಿರ ಆರೋಪಿಗಳು ಗಾಂಜಾ ಮಾರಾಟ ಮತ್ತು ಖರೀದಿ ವ್ಯವಹಾರ ನಡೆಸುತ್ತಿದ್ದರೆಂದು ಹೇಳಲಾಗಿದೆ.
ಆರೋಪಿಗಳಿಂದ 1 ಕೆಜಿ 605 ಗ್ರಾಂ ಗಾಂಜಾ, ರೂ. 1 ಸಾವಿರ ನಗದು ಹಣ, 1 ಮಾರುತಿ 800 ಕಾರು, 1 ಎಸ್ಟೀಮ್ ಕಾರು ಮತ್ತು 3 ಮೊಬೈಲ್’ನ್ನು ವಶಪಡಿಸಿಕೊಳ್ಳಲಾಗಿದೆ.
ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್ ಸಿ. ವಿ. ಶ್ರೀಧರ್ ಮತ್ತು ಸಿಬ್ಬಂದಿಗಳು ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿದ್ದರು.