Saturday, December 9, 2023

Latest Posts

ಯುವ ದಸರಾಗೆ ಮೆರಗು ತಂದ ಸ್ಯಾಂಡಲ್ ವುಡ್ ಕಲಾವಿದರು!

ಹೊಸದಿಗಂತ ವರದಿ, ಮೈಸೂರು:

ಜಗಮಗಿಸುವ ವರ್ಣರಂಜಿತ ಬೆಳಕಿನ ನಡುವೆ ಡಾ.ಶಿವರಾಜ್ ಕುಮಾರ್ ಅವರ ಚಿತ್ರದ ಮಾಸ್ ಡೈಲಾಗ್, ಮನಮೋಹಕ ನೃತ್ಯ, ನಟ ಶರಣ್ ಅವರ ಗಾಯನ, ಚಿತ್ರನಟ ಸಾಧು ಕೋಕಿಲ ಹಾಸ್ಯಕ್ಕೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆಕರ್ಷಣೆ ಹಾಗೂ ಕೇಂದ್ರಬಿಂದುವಾದ ಯುವಕರ ಕಣ್ಮನ ಸೆಳೆಯುವ ಯುವ ದಸರಾ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ದೀಪ ಬೆಳಗಿಸುವುದರ ಮೂಲಕ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನಟರು ಚಿತ್ರರಂಗಕ್ಕೆ ಮೆರಗು ತಂದರು.
ಚಿತ್ರ ನಟ
ಶಿವರಾಜ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಯುವ ದಸರಾವನ್ನು ಸಂಭ್ರಮಿಸಿ. ಆದರೆ ಓದುವ ಸಮಯದಲ್ಲಿ ಓದ ಬೇಕು. ತಂದೆ ತಾಯಿಗಳಿಗೆ ಗೌರವ ಕೊಡಬೇಕು ಎಂದು ಯುವ ಸಮೂಹಕ್ಕೆ ಕಿವಿ ಮಾತು ಹೇಳುವುದರ ಜೊತೆಗೆ ನ್ಯಾಯವೇ ದೇವರು ಚಿತ್ರದ ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು ಹಾಗೂ ಆನಂದ್ ಚಿತ್ರದ ಟುವ್ವಿ ಟುವ್ವಿ ಹಾಗೂ ಮುತ್ತಣ್ಣ ಚಿತ್ರದ ಮುತ್ತಣ್ಣ ಪಿಪಿ ಉದುವ ಎಂಬ ಗೀತೆಯನ್ನು ಹಾಡಿ ನೋಡುಗರನ್ನು ರಂಜಿಸಿದರು.

ಚಿತ್ರನಟ ಶರಣ್ ಮಾತನಾಡಿ, ಮೈಸೂರು ಅಂದರೆ ದಸರಾ, ದಸರಾ ಅಂದರೆ ಯುವ ದಸರಾ. ಯುವ ದಸರಾ ಅಂದರೆ ಯುವ ಮನಸ್ಸುಗಳ ಹಬ್ಬ. ದಸರಾ ನಾಡಿನ ಹಬ್ಬ. ನಾನು ಇಲ್ಲಿಗೆ ಬಂದು ನಿಲ್ಲಲು ನೀವೆ ಕಾರಣ. ದಸರಾ ಸಮಯಕ್ಕೆ ಬರುವ ನನ್ನ ಸಿನಿಮಾಗಳು ಹಿಟ್ ಆಗಲು ನೀವೆ ಕಾರಣ. ಈ ಬಾರಿಯು ನನ್ನ ಸಿನಿಮಾ ಚೂ ಮಂತರ್ ಚಿತ್ರ ಬರುತ್ತಿದೆ. ಅದನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ತಮ್ಮ ಮನವಿ ಮಾಡಿದರು.

ಬಳಿಕ ಶರಣ್ ಶಂಕರ್ ನಾಗ್ ಅಭಿನಯದ ಗೀತಾ ಚಿತ್ರದ ಜೊತೆ ಜೊತೆಯಲ್ಲಿ ಇರುವೆನು ಹೀಗೆ, ತಮ್ಮದೆ ಚಿತ್ರವಾದ ಆದ್ಯಕ್ಷ ಚಿತ್ರದ ಕೈ ನಾಗೆ ಮೈಕ್ ಇಟ್ರೆ ನಾನ್ ಸ್ಟಾಪ್ ಭಾಷಣ ಹಾಗೂ ರ್ಯಾಂಬೋ 2 ಚಿತ್ರದ ಚುಟು ಚುಟು ಗೀತೆಯನ್ನು ಹಾಡಿ ಯುವ ಸಮೂಹಗಳನ್ನು ರಂಜಿಸಿದರು.

ದಿವ್ಯ ರಾಮಚಂದ್ರ ಅವರು ಕೆ.ಜಿ.ಎಫ್ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಚಿತ್ರದ ಹಾಡನ್ನು ಹಾಡುವ ಮೂಲಕ ಯುವ ಸಮೂಹಕ್ಕೆ ಸಂಗೀತದ ಮುದ ಸವಿಯುವಂತೆ ಮಾಡಿದರೆ, ವ್ಯಾಸರಾಜ ಸೋಸಲೇ ಅವರು ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ನೋಡು ಕತ್ತು ಎತ್ತಿ ಎಷ್ಟು ಒತ್ತು ನೋಡ್ತಿ ಹಾಡಿನ ಮೂಲಕ ಸಭಿಕರ ಗಮನ ಸೆಳೆದರು.

ಬಿಗ್ ಬಾಸ್ ಖ್ಯಾತಿಯ ಕಿಶನ್ ಅವರು ಕಾಂತರ ಚಿತ್ರದ ಸಿಂಗಾರ ಸಿರಿಯೇ‌ ಹಾಗೂ ದರ್ಶನ್ ಅಭಿನಯದ ರಾಬರ್ಟ್‌ ಚಿತ್ರದ ಬಾ ಬಾ ನಾ ರೆಡಿ ಹಾಗೂ ಜೆಮ್ಸ್ ಚಿತ್ರದ ಗೀತೆಗೆ ಅದ್ಭುತವಾಗಿ ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ಯುವ ಸಮೂಹವನ್ನು ರಂಜಿಸುವುದರ ಜೊತೆಗೆ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ತಮ್ಮ ನೃತ್ಯದ ಮೂಲಕ ತಮ್ಮ ಪ್ರೀತಿಯನ್ನು ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಮಧುಬಂಗಾರಪ್ಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಾ ಲಾಟ್ಕರ್, ಸುನೀಲ್ ಬೋಸ್, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಇತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!