ಹೊಸದಿಗಂತ ವರದಿ ಧಾರವಾಡ:
ವಿಶ್ವದಲ್ಲೇ ಸಂಸ್ಕೃತ ಅತ್ಯಂತ ಸರಳ ಭಾಷೆ. ಇದು ಕಠಿಣವಲ್ಲ. ಎಲ್ಲರಿಗೂ ಸಂಸ್ಕೃತ ಭಾಷೆ ತಲುಪಿಸುವಲ್ಲಿ ಸಂಸ್ಕೃತ ಭಾರತಿ ಸಂಘಟನೆ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಡಾ. ಎಚ್. ಆರ್. ವಿಶ್ವಾಸ ಹೇಳಿದರು.
ನಗರದ ಸೃಜನಾ ರಂಗಮಂದಿರದಲ್ಲಿ ಸಂಸ್ಕೃತ ಭಾರತಿಯಿಂದ ನಡೆದ ಸಂಸ್ಕೃತಧಾರಾ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
40 ವರ್ಷ ಮೊದಲು ಸಂಸ್ಕೃತ ಭಾಷೆಯ ಸ್ಥಿತಿ ಗಂಭೀರವಾಗಿತ್ತು. ಸಂಸ್ಕೃತ ಕಾರ್ಯಕ್ರಮವೆಂದರೆ ಬೆರಳೆಣಿಕೆಯ ಜನ ಇರುತ್ತಿದ್ದರು. 1980ರ ನಂತರ ಸಂಸ್ಕೃತ ಭಾಷೆಯನ್ನು ಜನರಿಗೆ ತಲುಪಿಸಲು ಜನಾರ್ಧನ ಹೆಗಡೆ, ಚ.ಮೂ. ಕೃಷ್ಣಶಾಸ್ತ್ರೀ ಮುಂತಾದವರು ಸಂಭಾಷಣಾ ಶಿಬಿರ ಆರಂಭಿಸಿದರು. ಅದು ಬಹುಬೇಗ ಜನಪ್ರಿಯವಾಯಿತು. ಕರ್ನಾಟಕದಲ್ಲಿ ಆರಂಭವಾದ ಈ ಸಂಘಟನೆ ಕೇವಲ ಭಾರತದಲ್ಲಷ್ಟೇ ಅಲ್ಲದೆ ದುಬೈ, ಅಮೇರಿಕೆ ಸೇರಿದಂತೆ 40ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಸ್ಕೃತದ ವ್ಯಾಪಕ ಪ್ರಚಾರಕ್ಕಾಗಿ ಪತ್ರಿಕೆ, ಪುಸ್ತಕ, ಸಾಹಿತ್ಯ ಪ್ರಕಾಶನ, ಸಂಸ್ಕೃತದಲ್ಲಿ ಸಿನೆಮಾ ನಿರ್ಮಾಣ ಮುಂತಾದ ಕಾರ್ಯ-ಕಾರ್ಯಕ್ರಮ ನಡೆಯುತ್ತಿವೆ. ಸಮಾಜದಲ್ಲಿ ಸಂಸ್ಕೃತ ಕುರಿತು ಆಸಕ್ತಿ ಮೂಡಿಸುವುದೆ ಸಂಸ್ಕೃತ ಭಾರತಿಯ ಕಾರ್ಯವಾಗಿದೆ ಎಂದು ಹೇಳಿದರು.
ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಸಂಸ್ಕೃತದ ಸೊಗಡು ಅನನ್ಯವಾದದು. ಸಂಸ್ಕೃತದಲ್ಲಿ ಪ್ರತಿಯೊಬ್ಬರು ಮಾತನಾಡುವುದೇ ಈ ಕಾರ್ಯಕ್ರಮದ ಉದ್ದೇಶ. ನಮ್ಮ ಎಲ್ಲ ಜ್ಞಾನಗಳು ಸಂಸ್ಕತದಲ್ಲೇ ಇವೆ. ಸಂಸ್ಕೃತ ಕಲಿತರೆ ಮಾತ್ರ ಸಾಲದು ಅದನ್ನು ನಿತ್ಯ ಜೀವನದಲ್ಲಿ ಬಳಸಬೇಕು. ಈ ಕುರಿತು ಅಧ್ಯಯನವೂ ಆಗಬೇಕು ಎಂದು ಹೇಳಿದರು