ಹೊಸದಿಗಂತ ವರದಿ ಶಿವಮೊಗ್ಗ:
ಸ್ಯಾಂಟ್ರೋ ರವಿ ಓರ್ವ ಕಾಮುಕ ವ್ಯಾಪಾರಿ. ನಾನೂ ಕೂಡ ಆತನ ಮೇಲೆ ಕೇಸು ದಾಖಲಿಸಿ ಕ್ರಮಕೈಗೊಂಡಿದ್ದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಭಾಸ್ಕರರಾವ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದುರ್ಬಲ ಸರ್ಕಾರವಿದ್ದಾಗ ಸ್ಯಾಂಟ್ರೋ ರವಿಯಂತಹ ಕಾಮುಕ ವ್ಯಾಪಾರಿಗಳು ತಲೆ ಎತ್ತುತ್ತಾರೆ. ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಮುಖ್ಯಮಂತ್ರಿಗಳು ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದರು.
ಈ ಬಾರಿ ರಾಜ್ಯದ ಎಲ್ಲಾ ಭಾಗಗಳಿಂದಲೂ ಆಮ್ಆದ್ಮಿ ಪಕ್ಷ ಸ್ಪರ್ಧೆ ಮಾಡಲಿದೆ. ಈಗಾಗಲೇ ರಾಷ್ಟ್ರೀಯ ಪಕ್ಷ ಎಂಬ ಮಾನದಂಡ ಲಭ್ಯವಾಗಿದೆ. ಕರ್ನಾಟಕದಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಯತ್ನ ಮಾಡಲಾಗುತ್ತದೆ. ಇದಕ್ಕಾಗಿಯೇ ಉತ್ತಮ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದರು.
ಇತರೆ ಪಕ್ಷಗಳ ನಾಯಕರಂತೆ ಕೆಟ್ಟ ಪದಗಳನ್ನು ಬಳಸಿ ಯಾರಿಗೂ ಟೀಕೆ ಮಾಡುವುದಿಲ್ಲ. ಕುಡಿಯುವ ನೀರು, ಸ್ವಚ್ಛತೆ, ಆರೋಗ್ಯ, ಶಿಕ್ಷಣ, ವಿದ್ಯುತ್ ಹೀಗೆ ಹಲವಾರು ಮೂಲ ಸೌಕರ್ಯಗಳನ್ನು ಉಚಿತವಾಗಿ ನೀಡುವುದು ಪಕ್ಷದ ಗುರಿಯಾಗಿದೆ. ಇದನ್ನು ಜನರ ಮುಂದಿಟ್ಟು ಮತಯಾಚನೆ ಮಾಡಲಾಗುತ್ತದೆ. ಜನರೂ ಕೂಡ ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ವಿಜ್ಞಾನಿಗಳು, ಚಿಂತಕರು, ನಿವೃತ್ತ ಅಧಿಕಾರಿಗಳು ಪಕ್ಷಕ್ಕೆ ಸೇರುತ್ತಿದ್ದಾರೆ ಎಂದರು.