ಹೊಸ ದಿಗಂತ ವರದಿ , ಶನಿವಾರಸಂತೆ:
ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು ಗಾಳಿ ಸಹಿತ ಭಾರೀ ಮಳೆಯಾಗಿದೆ ಕೆಲವು ಕಡೆಗಳಲ್ಲಿ ಗುಡುಗು, ಆಲಿಕಲ್ಲು ಸಹಿತ ಮಳೆ ಬಿದ್ದಿದೆ.
ಶನಿವಾರಸಂತೆ ಪಟ್ಟಣ, ಹೋಬಳಿ ವ್ಯಾಪ್ತಿಯ ದುಂಡಳ್ಳಿ, ಗೋಪಾಲಪುರ, ನಿಡ್ತ, ಮುಳ್ಳೂರು, ಕಣಿವೆಬಸವನಹಳ್ಳಿ, ಮಾಲಂಬಿ ಗ್ರಾಮದಲ್ಲಿ ಗುಡುಗು, ಆಲಿಕಲ್ಲು ಸಹಿತ ವ್ಯಾಪಕವಾಗಿ ಮಳೆಯಾಗಿದೆ. ಮುಳ್ಳೂರು ಗ್ರಾಮದ ಮುಖ್ಯರಸ್ತೆ ಬದಿಯಲ್ಲಿರುವ ಇಂಟಿನಾಯಕನ ಕೆರೆ ಸಮೀಪ ಭಾರೀ ಮಳೆಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಗಾಳಿ ಮಳೆಗೆ ರಸ್ತೆ ಬದಿಯ ಮರದ ಕೊಂಬೆ ವಿದ್ಯುತ್ ಕಂಬದ ಮೇಲೆ ಬಿದ್ದಿದೆ.
ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಈ ವರ್ಷ ಒಂದು ಹನಿಯೂ ಮಳೆಯಾಗಿರಲಿಲ್ಲ. ಈ ಭಾಗದ ಜನರು, ರೈತರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದರು. ಕೆಲವು ಕಡೆಗಳಲ್ಲಿ ರೈತರು ಮಳೆಯ ಆಗಮನಕ್ಕಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಮಂಗಳವಾರ ಮಧ್ಯಾಹ್ನ ಈ ವರ್ಷದ ಮೊದಲ ಮಳೆಯಾಗಿದ್ದರೂ ಜನರು, ರೈತರು ಮತ್ತಷ್ಟು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಸರಾಸರಿ 9 ಇಂಚು ಮಳೆಯಾಗಿತ್ತು , ಆದರೆ ಈ ವರ್ಷ ಒಂದು ಹನಿಯೂ ಮಳೆಯಾಗಿರಲ್ಲಿಲ್ಲ.