ಹೊಸದಿಗಂತವರದಿ,ಮಂಗಳೂರು :
ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ‘ಸೇವ್ ಅವರ್ ಸೋಲ್ ‘ ಕಿರುಚಿತ್ರ ಅ.18ರಂದು ಸಾಯಂಕಾಲ ಯು ಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ.
16 ನಿಮಿಷ ಅವಧಿಯ ಈ ಕಿರುಚಿತ್ರದಲ್ಲಿಅತ್ಯಾಚಾರ, ಅಪಘಾತದಂತಹ ಘಟನೆ ಸಂಭವಿಸಿದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಫೋನ್ನಲ್ಲಿರುವ ಫೀಚರ್ ಬಳಸಿ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎನ್ನುವ ಮಹತ್ವದ ಸಂದೇಶ ಸಾರಲಾಗಿದೆ ಎಂದುಎಂದು ನಿರ್ಮಾಪಕ ಯು.ಜಿ.ರಾಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎ.ಯು. ಕ್ರಿಯೇಶನ್ಸ್ನ ಮುಖ್ಯಸ್ಥ ಅಚಲ್ ಉಬರಡ್ಕ ಅವರು ಈ ಕಿರುಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಎಡಿಟಿಂಗ್ ಮಾಡಿದ್ದು ಗುರುಮೂರ್ತಿ ಅಮ್ಮಣ್ಣಾಯ ಮತ್ತು ರತ್ನ ಸಿಂಚನ ಸಹನಿರ್ದೇಶಕರಾಗಿದ್ದಾರೆ. ಸಾತ್ವಿಕ್ ಪಡಿಯಾರ್ ಸಂಗೀತ ನೀಡಿದ್ದಾರೆ.
ಎ.ಯು. ಕ್ರಿಯೇಶನ್ಸ್ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.
ಚಿತ್ರದ ಪ್ರಿಮೀಯರ್ ಪ್ರದರ್ಶನ ಅ.16ರಂದು ಸಾಯಂಕಾಲ 5.45ಕ್ಕೆ ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ನಡೆಯಲಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್., ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಯು.ಜಿ.ರಾಧ ತಿಳಿಸಿದರು.
ನಟ, ನಿರ್ದೇಶಕ ಅಚಲ್ ಉಬರಡ್ಕ, ಅನಿಶ್ ಗಾಣಿಗ, ಗುರುಮೂರ್ತಿ ಅಮ್ಮಣ್ಣಾಯ ಉಪಸ್ಥಿತರಿದ್ದರು.