ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಹಾರವಾಡ ತರಂಗಮೇಟದಲ್ಲಿ ಭಾರೀ ಪ್ರಮಾಣದಲ್ಲಿ ಕಡಲ ಕೊರೆತ ಕಡಲ ಅಲೆಗಳ ಹೊಡೆತಕ್ಕೆ ಮನೆಯೊಂದು ಕೊಚ್ಚಿ ಹೋಗಿ ಸಮುದ್ರಪಾಲಾಗಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ.
ಬುಧವಾರ ರಾತ್ರಿಯಿಂದ ಕಡಲ ಅಬ್ಬರ ಹೆಚ್ಚಿದ್ದು ವ್ಯಾಪಕ ಪ್ರಮಾಣದಲ್ಲಿ ಕಡಲ ಕೊರೆತ ಕಂಡು ಬಂದಿದ್ದು ಅಶೋಕ ಹರಿಕಂತ್ರ ಎನ್ನುವವರಿಗೆ ಸೇರಿದ ಮನೆ ಮತ್ತು ತೆಂಗಿನ ಮರಗಳು ಕೊಚ್ಚಿ ಹೋಗಿವೆ ಸಮೀಪದಲ್ಲಿ ಇರುವ ಇನ್ನೊಂದು ಮನೆಗೆ ಸಹ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ಹಾನಿ ಸಂಭವಿಸುವ ಸಾಧ್ಯತೆ ಇದೆ.
ಈ ಬಾರಿ ಮಳೆಗಾಲದ ಆರಂಭದಿಂದಲೂ ಹಾರವಾಡ ತರಂಗಮೇಟ ಕಡಲ ತೀರದಲ್ಲಿ ಭಾರೀ ಪ್ರಮಾಣದಲ್ಲಿ ಕಡಲ ಕೊರೆತ ಕಂಡು ಬಂದಿದ್ದು ಅಪಾರ ಪ್ರಮಾಣದಲ್ಲಿ ತೆಂಗಿನ ಮರಗಳು ಕೊಚ್ಚಿ ಹೋಗಿ ಸಮುದ್ರ ಪಾಲಾಗಿದ್ದವು.
ಈ ಭಾಗದಲ್ಲಿ ಇರುವ ಮೀನುಗಾರರ ಮನೆಗಳಿಗೂ ಹಾನಿಯ ಸಾಧ್ಯತೆ ಹಿಮ್ನೆಲೆಯಲ್ಲಿ ಸ್ಥಳೀಯರು ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿದ್ದರು.
ಇದೀಗ ಮನೆ ಕೊಚ್ಚಿ ಹೋಗಿರುವ ಸ್ಥಳದಲ್ಲಿ ಮೂರು ಮನೆಗಳಿದ್ದು ಆ ಭಾಗದ ಜನರು ಭಯ ಭೀತರಾಗಿದ್ದಾರೆ.
ಈ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಆಗ್ರಹಿಸುತ್ತ ಬರಲಾಗಿದ್ದರೂ ಇದುವರೆಗೆ ಯಾವುದೇ ರೀತಿಯ ಕ್ರಮಗಳು ಆಗದಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.