ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಕರೆಯಲಾಗಿದ್ದು, ಇತ್ತ ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿಯಿಂದ ಚಲ್ಲಘಟ್ಟ ಮಟ್ರೋ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಪರಿಶೀಲನೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಸೆ.29 ಶುಕ್ರವಾರ ಕೆಂಗೇರಿಯಿಂದ ಮೈಸೂರು ರಸ್ತೆವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.
ಬೆಂಗಳೂರು ನಗರದ ಟ್ರಾಫಿಕ್ ರಹಿತ ಸಂಚಾರಕ್ಕೆ ಅನುಕೂಲವಾಗಿರುವ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸೆ.29ರ ಶುಕ್ರವಾರ ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಕೆಂಗೇರಿಯಿಂದ ಚಲ್ಲಘಟ್ಟ ಮಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ನಡೆಸುವುದರಿಂದ, ಮೆಟ್ರೋ ರೈಲು ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಇನ್ನು ನೇರಳೆ ಮಾರ್ಗದ ಮುಂದುವರೆದ ಭಾಗವಾದ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಹಾಗೂ ವೈಟ್ ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಿಲ್ದಾಣಗಳ ನಡುವೆ ಪೂರ್ಣ ದಿನದಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಸಾಮಾನ್ಯ ದಿನಗಳಂತೆ ಬೆಳಗ್ಗೆಯಿಂದ ರಾತ್ರಿವರೆಗೆ ಮೆಟ್ರೋ ಸೇವೆ ಲಭ್ಯವಿರುತ್ತದೆ. ಉಳಿದಂತೆ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಬೇಕೆಂದು ಮಾಧ್ಯಮ ಪ್ರಕಟಣೆ ಎಂದು ಮನವಿ ಮಾಡಿದ್ದಾರೆ.