ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿದೆ ಬೆನ್ನಲ್ಲೇ ವೀಕ್ಷಕರ ಪಾಸ್ ಅನ್ನು ನಿಷೇಧಿಸಿ ಸ್ಪೀಕರ್ ಓಂ ಬಿರ್ಲಾ(Speaker Om Birla) ಆದೇಶ ಹೊರಡಿಸಿದ್ದಾರೆ.
ಲೋಕಸಭೆಯ ಕಲಾಪದ ಸಂದರ್ಭದಲ್ಲಿ ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್ ಬಳಿ ನುಗ್ಗಿದ್ದು, ಬಳಿಕ ಸ್ಮೋಕ್ ಕ್ರ್ಯಾಕರ್ ಸಿಡಿಸಿದ್ದರು. ಇದರಿಂದ ಕೆಲಕಾಲ ಸಂಸತ್ತಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೇಕ್ಷರ ಪಾಸ್ನ್ನು ನೀಡಲಾಗುವುದಿಲ್ಲ ಎಂದು ಓಂ ಬಿರ್ಲಾ ಹೇಳಿದ್ದಾರೆ.
ಸದನ ಅಂದೂ ನಡೆದಿತ್ತು, ಇಂದೂ ನಡೆಯಲಿದೆ, ಭಾರತದ ಜನರ ಆಶೋತ್ತರಗಳಿಗಾಗಿ ನಾವು ಇಲ್ಲಿ ಸೇರಿದ್ದೇವೆ, ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ. ನಡೆದಿರುವ ಘಟನೆ ಬಗ್ಗೆ ನಿಮ್ಮೆಲ್ಲರ ಮುಂದೆ ಹೇಳಲಿದ್ದೇವೆ.ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರೆಲ್ಲರ ಜತೆ ಕುಳಿತು ಮಾತನಾಡಲಿದ್ದೇನೆ, ನಿಮ್ಮೆಲ್ಲರ ರಕ್ಷಣೆ ನನ್ನ ಹೊಣೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಸದಸ್ಯರು ಭಯಪಡುವಹಾಗಿಲ್ಲ, ಸದನದಲ್ಲಿ ಹರಡಲಾಗಿದ್ದ ಹೊಗೆಯ ಪ್ರಾಥಮಿಕ ಮಾಹಿತಿ ನನ್ನ ಬಳಿ ಇದೆ, ಎಲ್ಲವನ್ನೂ ನಿಮ್ಮ ಗಮನಕ್ಕೆ ತರಲಿದ್ದೇನೆ , ನಾನೂ ನಿಮ್ಮ ಜತೆಗೆ ಕುಳಿತಿಲ್ಲವೇ ಎಂದು ಸ್ಪೀಕರ್ ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ, ಘಟನೆಯಲ್ಲಿ ಯಾರೂ ಕೂಡ ಗಾಯಗೊಂಡಿಲ್ಲ. ಇದು ಲೋಕಸಭೆಯ ಒಳಗೆ ನಡೆದರೆ, ಸಂಸತ್ತಿನ ಹೊರಗೆ ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.