ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆಯಲ್ಲಿ ಮಜ್ಜಿಗೆಗಂತೂ ಫುಲ್ ಡಿಮ್ಯಾಂಡ್. ಆದರೆ ಮಳೆಗಾಲದಲ್ಲಿ ಕೊಂಚ ಕಡಿಮೆ, ಆದರೂ ಹಳ್ಳಿ ಪ್ರದೇಶದ ಜನರು ಬೇಸಿಗೆಯಾದರು ಸರಿ, ಮಳೆಯಾದರ ಸರಿ ಮಜ್ಜಿಗೆ ಬೇಕೆ ಬೇಕು. ಮಜ್ಜಿಗೆಗೆ ಹಸಿಮೆಣಸು, ಉಪ್ಪು, ಜೀರಿಗೆ ಪುಡಿ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ.
ಅರೆ ಕಡೆದ ಮಜ್ಜಿಗೆ ಎಂದರೆ ಏನು? :ಮೊಸರನ್ನು ಕಡೆಯುತ್ತಾ ಸಾಗಿದಂತೆ ಅದು ಮಂದ ದ್ರವರೂಪಕ್ಕೆ ತಿರುಗುತ್ತದೆ ಮತ್ತು ಮೇಲ್ಭಾಗದಲ್ಲಿ ಇದ್ದ ಮೊಸರ ಕೆನೆ ಸಂಪೂರ್ಣವಾಗಿ ಆ ಮಂದ ದ್ರವದಲ್ಲಿ ಒಂದಾಗಿಬಿಡುತ್ತದೆ. ಇದು ಹೇಗೆಂದರೆ, ಕಾಯಿಸದ ಹಾಲಿನಲ್ಲಿ ಜಿಡ್ಡು ಒಂದಾಗಿರುವಂತೆ ಇಲ್ಲಿ ಮೊಸರೂ ಅಲ್ಲದ, ಮಜ್ಜಿಗೆಯೂ ಅಲ್ಲದ ಮಂದ ದ್ರವರೂಪದಲ್ಲಿ ಜಿಡ್ಡು ಬೆರೆತಿರುವ ಕಾರಣ ಅದು ರುಚಿಯಾಗಿ ಇರುತ್ತದೆ. ಅಂದರೆ, ಅದರಿಂದ ಬೆಣ್ಣೆ ಪ್ರತ್ಯೇಕವಾಗಿರದ ಅವಸ್ಥೆ.
ಮಜ್ಜಿಗೆಯ ಉಪಯೋಗ:
ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು: ಮಜ್ಜಿಗೆ ಕುಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಇನ್ನು ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ.
ದೇಹದ ತಾಪಮಾನವನ್ನು ತಣಿಸುತ್ತದೆ: ಬೇಸಿಗೆಯ ಬಿಸಿಗೆ ದೇಹವೂ ಬಿಸಿಯಾಗುತ್ತದೆ. ಇದನ್ನು ತಣಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿಯಬೇಕಾಗುತ್ತದೆ. ಮಜ್ಜಿಗೆಯ ಸೇವನೆ ಈ ತೊಂದರೆಯನ್ನು ತಡೆಯುತ್ತದೆ ಹಾಗೂ ದೇಹವನ್ನು ತಂಪಾಗಿಡಲು ನೆರವಾಗುತ್ತದೆ.
ಹೊಟ್ಟೆ ಉಬ್ಬರಿಕೆ ಮೊದಲಾದ ಸಮಸ್ಯೆಗೆ ಮಜ್ಜಿಗೆ ರಾಮಬಾಣ
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೊರತಾಗಿ ವಿವಿಧ ಪ್ರೋಟೀನುಗಳು, ವಿಟಮಿನ್ ಬಿ, ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯದ ದೃಷ್ಠಿಯಿಂದಲೂ ಮಜ್ಜಿಗೆ ಸೇವನೆ ಉತ್ತಮ. ಮಜ್ಜಿಗೆಯನ್ನು ಸೇವಿಸುದರಿಂದ ರಕ್ತದೊತ್ತಡ ನಿವಾರಣೆಯಾಗುತ್ತದೆ.
ಅರೆಗಡೆದ ಮಜ್ಜಿಗೆ ಯಾರಿಗೆ ಒಳಿತು:
ಯಾರು ನಿರಂತರ ಕ್ರಿಯಾಶೀಲರೋ, ಯಾರು ಮೈ ಬೆವರಿಸುತ್ತಾರೋ, ಯಾರ ಜೀರ್ಣಶಕ್ತಿ ಚೆನ್ನಾಗಿದೆಯೋ, ಯಾರು ತಳ್ಳಗೆ ಮತ್ತು ಮಧ್ಯಮ ಶರೀರಿಗಳೋ(ದಢೂತಿಗಳಲ್ಲವೋ ಅವರು), ಇಂಥವರು ವಾರದಲ್ಲಿ ಒಂದು ಅಥವಾ ಎರಡು ಬಾರಿ ಅರೆಗಡೆದ ಮಜ್ಜಿಗೆಯನ್ನು ಆಹಾರದೊಂದಿಗೆ ಸೇವಿಸಬಹುದು. ಇದರಿಂದ ಶಾರೀರಿಕ ಶಕ್ತಿ ವರ್ಧಿಸುತ್ತದೆ, ಮನಸ್ಸು ಶಾಂತವಾಗುತ್ತದೆ.
ವಿ.ಸೂ: ಈ ಮೇಲಿನ ವ್ಯಕ್ತಿಗಳಿಗೆ ಅರೆಗಡೆದ ಮಜ್ಜಿಗೆ ಸೇವಿಸಿದ ನಂತರ ಶರೀರದ ಯಾವುದೇ ಭಾಗದಲ್ಲಿ ತುರಿಕೆ ಕಂಡುಬಂದರೆ ಸಂಧಿಗಳು ಭಾರ ಎನ್ನಿಸಿದರೆ, ತಕ್ಷಣ ನಿಲ್ಲಿಸಬೇಕು.
ಅರೆಗಡೆದ ಮಜ್ಜಿಗೆ ಯಾರಿಗೆ ಯೋಗ್ಯವಲ್ಲ:
ಮೇದಸ್ಸು ಹೆಚ್ಚಿದ್ದು ದಢೂತಿ ದೇಹ ಹೊಂದಿರುವವರು, ಕಫದ ದೋಷ ಇರುವವರು, ಆಲಸಿಗಳು, ಶಾರೀರಿಕ ಶ್ರಮ ಇಲ್ಲದವರು, ಹಗಲು ನಿದ್ದೆ ಮಾಡುವವರು, ಮೈ ಬೆವರದವರು, ಚರ್ಮದ ರೋಗ ಉಳ್ಳವರು, ಆಮವಾತರೋಗಿಗಳು ಇವರಿಗೆ ಈ ಮಜ್ಜಿಗೆ ತೊಂದರೆಯನ್ನು ತರುತ್ತದೆ.