ಹೊಸದಿಗಂತ ವರದಿ ಹಾವೇರಿ:
ಜಿಲ್ಲೆಯ ಎಂಟು ತಾಲೂಕಿನಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಲಶಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಹೇಳಿದರು.
ನೆಹರು ಯುವಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ನನ್ನ ದೇಶ ನನ್ನ ಮಣ್ಣು ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶಪ್ರೇಮ, ಭ್ರಾತೃತ್ವ ಒಡಮೂಡಿಸಲು, ದೇಶದ ಐಕ್ಯತೆ ಉಳಿಸಿ ಬೆಳೆಸಿಕೊಂಡು ಹೋಗಲು ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮ ಅಗತ್ಯ. ನಾವಿಲ್ಲಿ ಸುರಕ್ಷಿತವಾಗಿ ಇರಲು ಕಾರಣರಾದವರು ಗಡಿಯಲ್ಲಿನ ಸೈನಿಕರು. ದೇಶದ ಒಳಗೆ ರಾಷ್ಟ್ರ ನಿರ್ಮಾಣ ಕಾರ್ಯ ಎಲ್ಲರಿಂದಲೂ ಆಗಬೇಕಿದೆ. ಇದಕ್ಕೆ ಎನ್ ಸಿಸಿ, ಎನ್ ಎಸ್ಎಸ್ ಪೂರಕವಾಗಿವೆ. ಕೇವಲ ಸ್ವಚ್ಚತೆ ಅಷ್ಟೇ ಅಲ್ಲದೇ ರಾಷ್ಟ್ರ ನಿರ್ಮಾಣದ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳು, ಯುವ ಸಮುದಾಯದ ಪಾತ್ರ ಹೆಚ್ಚಿನದಾಗಿದೆ ಎಂದರು.
ಇದೇ ವೇಳೆ ಕಾರ್ಗಿಲ್ ಯೋಧರಾದ ಮಹ್ಮದ ಖವಾಸ್ ಮತ್ತು ಶರಣಪ್ಪ ಹೊಂಬಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ.ಸಂತೋಷ ಆಲದಕಟ್ಟಿ, ಅಂಚೇ ಅಧೀಕ್ಷಕ ಜಿ.ಎಸ್. ಗಡಗಿ, ಎಂ.ಸಿ. ಕೊಳ್ಳಿ ಮತ್ತಿತರರು ಇದ್ದರು.