ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದಿಂದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆ ಅಂಗವಾಗಿ ಸಾಹಿತ್ಯದಲ್ಲಿ ಸಾಧನೆ ಮಾಡಿದ ಸಾಹಿತಿಗಳಿಗೆ ಆ.2 ರಂದು ಕರ್ನಾಟಕ ವಾಣಿಜೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಸಂಗಮ ಸಿರಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾಣದ ಅಧ್ಯಕ್ಷ ಜಿ.ಜಿ. ಗೌಡಪ್ಪಗೋಳ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದಿಂದ ಈ ವರ್ಷದಿಂದ ಪ್ರಶಸ್ತಿ ನೀಡಲು ಆರಂಭಿಸಲಾಗಿದೆ. ಈ ಪ್ರಶಸ್ತಿಗೆ ಕಲಬುರಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ದಂಪತಿಗಳು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಫಲಕ ಹಾಗೂ 10 ಸಾವಿರ ರೂ. ನೀಡಲಾಗುತ್ತದೆ ಎಂದರು.
ಈ ಸಮಾರಂಭಕ್ಕೆ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ಹಾಗೂ ಸಾಹಿತಿ ಮಹಾಂತಪ್ಪ ನಂದೂರ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಬೀದರಿನ ಹಂಶಕವಿ ಅವರು ಸಂಪಾದಿಸಿದ ಆಧುನೀಕ ವಚನಗಳ ಭಾಗ -10 ಕೃತಿ ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಶಸ್ತಿ ಆಯ್ಕೆಯ ಮುಖ್ಯಸ್ಥರಾಗಿ ಹಿರಿಯ ಸಾಹಿತಿ ಮಹಾಂತಪ್ಪ ನಂದೂರು ಕಾರ್ಯ ನಿರ್ವಹಿಸಿದರು. ಆಯ್ಕೆ ಸಮಿತಿ ಸಭೆಯಲ್ಲಿ ಸಾಹಿತಿ ಎಸ್.ವಿ.ಪಟ್ಟಣಶೆಟ್ಟಿ, ಹಿರಿಯ ಪತ್ರಕರ್ತರಾದ ಗಣಪತಿ ಗಂಗೊಳ್ಳಿ, ಡಾ.ರಾಮು ಮುಲಗಿ, ಡಾ. ಮಹೇಶ ಹೊರಕೇರಿ, ಜಿ.ವಿ. ಹಿರೇಮಠ, ರವೀಂದ್ರ ರಾಮದುರ್ಗಕರ ಬಸವರಾಜ ಕರ್ಕಿ ಇತರರು ಪಾಲ್ಗೊಂಡಿದ್ದರು ಎಂದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ವೀರೇಶ ಹಂಡಗಿ, ಖಜಾಂಚಿ ಕರ್ಕಿ ಇದ್ದರು.