ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋ ಹತ್ಯೆ ಪ್ರಕರಣದ ಆರೋಪಿಗಳಿಗೆ ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಗೋವುಗಳಿಗೆ ಸೇವೆ ಮಾಡುವಂತೆ ಷರತ್ತು ವಿಧಿಸಿ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಯು ನೋಂದಾಯಿತ ಗೋಶಾಲೆಗೆ ರೂ.1 ಲಕ್ಷ ಜಮೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಸಲೀಂ ಆಲಿಯಾಸ್ ಕಲಿಯಾ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಈ ಆದೇಶ ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶದ ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಸಲೀಂ ವಿರುದ್ಧ ಐಪಿಸಿ ಸೆಕ್ಷನ್ 379(ಕಳವು) ಮತ್ತು ಗೋ ಹತ್ಯೆ ತಡೆ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿತ್ತು. ಜಾಮೀನು ಕೋರಿ ಅರ್ಜಿದಾರನ ಪರ ವಕೀಲರು ವಾದಿಸಿದರು.ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಬರೈಲಿ ಗೋ ಶಾಲೆಗೆ 1 ಲಕ್ಷ ರೂ. ಜಮೆ ಮಾಡಲಾಗುವುದು ಹಾಗೂ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡುವುದಾಗಿ ಅವರು ಹೇಳಿದರು.
ಕೋರ್ಟ್ ಅರ್ಜಿದಾರ ವೈಯುಕ್ತಿಕ ಬಾಂಡ್ ಹಾಗೂ ಎರಡು ಶ್ಯೂರಿಟಿ ಒದಗಿಸುವಂತೆ ಹೇಳಿ ಜಾಮೀನು ಮಂಜೂರು ಮಾಡಿತು.