ಹೊಸದಿಗಂತ ಡಿಜಿಟಲ್ ಡೆಸ್ಕ್:
ನದಿಯಲ್ಲಿ ಸ್ನಾನಕ್ಕೆ ತೆರಳಿದ ನಾಲ್ವರು ಬಾಲಕಿಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರು ಜಿಲ್ಲೆಯ ನೆಲ್ಲಿಕುಪ್ಪಂ ಸಮೀಪವರಿವ ಗ್ರಾಮಗಳ ಮಹಿಳೆಯರು ಮತ್ತು ಬಾಲಕಿಯರು ಭಾನುವಾರ ಕೆದಿಲಂ ನದಿಯ ಅಣೆಕಟ್ಟಿನ ಬಳಿ ಈಜಲು ಹೋಗಿದ್ದರು.
ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಎಲ್ಲರನ್ನೂ ಹೊರತೆಗೆದು ಕಡಲೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಎಲ್ಲರೂ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರಲ್ಲಿ ಐವರು ಕೂಚಿಪಾಳ್ಯಂ ಹಾಗೂ ಇಬ್ಬರು ಅಕಂಕಿರಿಂಜಿಪಾಡಿ ಗ್ರಾಮದವರು.
ನದಿಯಲ್ಲಿ ಈಜುವಾಗ ಸುಳಿಯಿಂದಾಗಿ ಇಬ್ಬರು ನೀರಿನಲ್ಲಿ ಸಿಲುಕಿಕೊಂಡಿದ್ದು, ಇಬ್ಬರನ್ನು ರಕ್ಷಿಸಲು ಹೋದ ಐವರೂ ನೀರು ಪಾಲಾಗಿದ್ದಾರೆ. ಈ ಘಟನೆ ಸ್ಥಳೀಯವಾಗಿ ತೀವ್ರ ಆಘಾತ ಉಂಟುಮಾಡಿದೆ. ಕೂಡ್ಲೂರು ಸರ್ಕಾರಿ ಆಸ್ಪತ್ರೆ ಬಳಿ ಮೃತರ ಸಂಬಂಧಿಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ನಾನಕ್ಕೆ ಹೋಗಿಬರುತ್ತೇವೆ ಎಂದು ಹೇಳಿ ಹೋಗಿದ್ದವರು. ಈಗ ಬಾರದ ಲೋಕಕ್ಕೆ ಹೋಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.