ಶಾದಿ ಭಾಗ್ಯ- ಟಿಪ್ಪು ಜಯಂತಿ ಒಡೆದಾಳುವ ನೀತಿಯ ತಂತ್ರಗಳು: ಅಪ್ಪಚ್ಚು ರಂಜನ್

ಹೊಸದಿಗಂತ ವರದಿ ಶನಿವಾರಸಂತೆ:

ಶಾದಿ ಭಾಗ್ಯ, ಟಿಪ್ಪು ಜಯಂತಿ ಬೇಕೆಂದು ಯಾರೂ ಕೇಳಿರಲಿಲ್ಲ. ಅವು ಅಂದಿನ ಕಾಂಗ್ರೆಸ್ ಸರ್ಕಾರದ ಒಡೆದಾಳುವ ನೀತಿಯ ತಂತ್ರಗಳಾಗಿದ್ದವು ಎಂದು ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ದೂರಿದ್ದಾರೆ.

ಶನಿವಾರಸಂತೆಯಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಾದಿ ಭಾಗ್ಯ ಕೆಟ್ಟ ಯೋಜನೆ ಎಂದು ತಾನು ಹೇಳುತ್ತಿಲ್ಲ. ಆದರೆ ಅದರ ಅಗತ್ಯವೇ ಇರಲಿಲ್ಲ. ಯೋಜನೆಗೆ ಭಾರೀ ಪ್ರಚಾರ ಕೊಡಲಾಯಿತೇ ವಿನಹ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ ಎಂದು ಹೇಳಿದರು.

ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಮಾತ್ರ ಶಾದಿಭಾಗ್ಯ ಎಂಬುದು ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿತೇ ವಿನಹ ಅದರಿಂದ ಆದ ಉಪಯೋಗ ಅಷ್ಟರಲ್ಲೇ ಇದೆ ಎಂದು ಅಪ್ಪಚ್ಚುರಂಜನ್ ಟೀಕಿಸಿದರು.

ಟಿಪ್ಪು ಜಯಂತಿ ಸೃಷ್ಟಿಸಿದ ಅನಾಹುತದ ಬಗ್ಗೆ ವಿವರಿಸಿ ಹೇಳುವ ಅಗತ್ಯವಿಲ್ಲ ಎಂದ ಅಪ್ಪಚ್ಚು ರಂಜನ್ ಜನತಂತ್ರದಲ್ಲಿ ಜನರಿಗೆ ಬೇಡದ ವಿಷಯಗಳನ್ನು ಅವರ ಮೇಲೆ ಹೇರಲಾಗುವುದಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ. ಮೇದಪ್ಪ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!