ಹೊಸದಿಗಂತ ಡಿಜಿಟಲ್ ಡೆಸ್ಕ್
ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಬಾರೀ ಭಕ್ತ ಜನರು ಆಗಮಿಸಿದ್ದರು.ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ಶ್ರೀ ದೇವರು ಒಳಾಂಗಣ ಪ್ರವೇಶಿಸುವ ದಿನ ರಜಾದಿನವಾದಭಾನುವಾರ ಬಂದುದರಿಂದ ಕ್ಷೇತ್ರಕ್ಕೆ ಭಕ್ತ ಸಂದೋಹವೇ ಹರಿದು ಬಂದಿತ್ತು. ಸುಮಾರು 60 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವರ ದರುಶನವನ್ನು ಪುಣ್ಯ ದಿನ ನೆರವೇರಿಸಿರಬಹುದೆಂದು ಅಂದಾಜಿಸಲಾಗಿದೆ.
ಅನ್ನದಾನ ಸ್ವೀಕಾರ:
ಪ್ರತಿದಿನದಂತೆ ಷಣ್ಮುಖ ಪ್ರಸಾದ ಬೋಜನ ಶಾಲೆಯಲ್ಲಿ ಅತ್ಯಧಿಕ ಭಕ್ತರು ಬೋಜನ ಸ್ವೀಕರಿಸಿದರು.ಬೆಳಗ್ಗೆ 10.15 ಗಂಟೆಯಿಂದ ಸಂಜೆ 4 ಗಂಟೆ ತನಕ ಪ್ರಸಾದ ಬೋಜನ ವಿತರಿಸಲಾಯಿತು.ಸುಮಾರು ಅಂದಾಜು 25 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಬೋಜನ ಸ್ವೀಕರಿಸಿದರು.
ಆಶ್ಲೇಷ ಪೂಜೆಗೆ ಭಕ್ತರ ದಂಡು:
ಆಶ್ಲೇಷ ನಕ್ಷತ್ರದ ಪುಣ್ಯ ದಿನ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಸುಮಾರು 2594 ಆಶ್ಲೇಷ ಬಲಿ ಸೇವೆ ನೆರವೇರಿದೆ. ಈ ಸೇವೆ ಸೇರಿದಂತೆ ಇತರ ಸೇವೆಗಳು ಕೂಡಾ ಅಧಿಕ ಸಂಖ್ಯೆಯಲ್ಲಿ ನೆರವೇರಿದೆ. ಶ್ರೀ ದೇವರ ದರುಶನ ಮತ್ತು ಸೇವಾಧಿಗಳನ್ನು ನೆರವೇರಿಸಲು ಭಕ್ತರು ಮಾರುದ್ದದ ಸರದಿ ಸಾಲಿನಲ್ಲಿ ಸಾಗಿ ಬಂದರು. ರಾಜಗೋಪುರದಿಂದ ಕೆ.ಎಸ್ ಆರ್. ಟಿ.ಸಿ ಬಸ್ ನಿಲ್ದಾಣದ ತನಕ ಸರತಿ ಸಾಲು ಮುಂದುವರೆದಿತ್ತು.ಭಕ್ತರೊಂದಿಗೆ ವಾಹನಗಳು ಅಧಿಕ ಸಂಖ್ಯೆಯಲ್ಲಿ ಬಂದ ಕಾರಣ ಪಾಕಿಂಗ್ ಸ್ಥಳಗಳು ತುಂಬಿತ್ತು.ಮಳೆ ಇಲ್ಲದ ಕಾರಣ ಭಕ್ತರಿಗೆ ಹೆಚ್ಚಿನ ಅನುಕೂಲತೆ ಸೃಷ್ಠಿಯಾಗಿತ್ತು.ಶ್ರೀ ದೇವಳದ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯ, ಕುಮಾರಧಾಗಳಲ್ಲಿ ಜನವೋ ಜನ ಕಂಡು ಬಂದಿತ್ತು.