ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಈ ವರ್ಷವೇ ತಮ್ಮ ದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ದೇಶದಿಂದ ಶಾಶ್ವತವಾಗಿ ಓಡಿಬಂದಿಲ್ಲ. ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ಹಾಗೂ ಅವಾಮಿ ಲೀಗ್ ಕಾರ್ಯಕರ್ತರಲ್ಲಿ ಧೈರ್ಯ ತುಂಬಲು ಶೀಘ್ರದಲ್ಲೇ ವಾಪಸ್ ಆಗಲಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ವಿದೇಶಿ ಪಿತೂರಿಯ ಆರೋಪ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ತಮಗೆ ಎದುರಾದ ರಾಜಕೀಯ ಬಿಕ್ಕಟ್ಟಿನ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಹಸೀನಾ ಗಂಭೀರ ಆರೋಪ ಮಾಡಿದ್ದಾರೆ. ಇದು ವ್ಯವಸ್ಥಿತ ರಾಜಕೀಯ ಪಿತೂರಿಯಾಗಿದ್ದು, ದೇಶದ ಶಾಂತಿ ಕೆಡಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡಲು ತಾವು ಸದಾ ಸಿದ್ಧರಿರುವುದಾಗಿ ಅವರು ಗುಡುಗಿದ್ದಾರೆ.
ಭಾರತ ಹಾಗೂ ಪಿಎಂ ಮೋದಿಗೆ ಕೃತಜ್ಞತೆ
ತಮ್ಮ ಕಠಿಣ ಸಂದರ್ಭದಲ್ಲಿ ಆಶ್ರಯ ನೀಡಿ ರಕ್ಷಿಸಿದ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇಖ್ ಹಸೀನಾ ಮನಃಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಐತಿಹಾಸಿಕ ಬಾಂಧವ್ಯವು ಅತ್ಯಂತ ಗಟ್ಟಿಯಾಗಿದ್ದು, ಇದನ್ನು ಯಾವುದೇ ಶಕ್ತಿಯೂ ಮುರಿಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಸೀನಾ ಅವರ ಈ ಹೇಳಿಕೆ ಇದೀಗ ಉಪಖಂಡದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.



