ಹೊಸದಿಗಂತ ವರದಿ ಹುಬ್ಬಳ್ಳಿ:
ಕೇಂದ್ರ ವರಿಷ್ಠರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಬರಲು ಏನು ಬೇಡಿಕೆ ಇಟ್ಟಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಇದು ನಾಲ್ಕು ಚೌಕಟ್ಟಿನಲ್ಲಿ ನಡೆ ಚರ್ಚೆಯಾಗಿದೆ. ಇಂತಹ ವಿಚಾರಗಳನ್ನು ಬಹಿರಂಗ ಮಾಡಲು ಆಗುವುದಿಲ್ಲ. ಆದರೆ ಕೇಂದ್ರದ ವರಿಷ್ಠರ ತೀರ್ಮಾನ ನಾವು ಸ್ವಾಗತ ಮಾಡುತ್ತೇವೆ ಎಂದರು.
ಸಾಮಾನ್ಯವಾಗಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗಬೇಕಾದರೇ ಮೊದಲ ರಾಜೀನಾಮೆ ನೀಡಬೇಕು. ಜಗದೀಶ ಶೆಟ್ಟರ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುವುದು ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೆ ನಾವು ಬದ್ಧರಿದ್ದೇವೆ ಎಂದು ಹೇಳಿದರು.
ಜಗದೀಶ ಶೆಟ್ಟರ ಅವರು ಪಕ್ಷದಲ್ಲಿ ಇರುವವರೆಗೂ ಯಾವುದೇ ಅಸಮಾಧಾನ ಇರಲಿಲ್ಲ. ಆದರೆ ಬೇರೆ ಪಕ್ಷಕ್ಕೆ ಹೋದಾಗ ಟೀಕೆ ಮಾಡುವುದು ರಾಜಕಾರಣದಲ್ಲಿ ಸಾಮಾನ್ಯ. ಈಗ ಪಕ್ಷ ಸೇರಿದ್ದಾರೆ ಎಲ್ಲರೂ ಜೊತೆಗೆ ಇರುತ್ತೇವೆ. ಈಗ ಬಗ್ಗೆ ನಾವು ಮಾತನಾಡುವುದಿಲ್ಲ. ಅವರನ್ನೆ ಕೇಳಬೇಕು ಎಂದು ತಿಳಿಸಿದರು.