ಹೊಸದಿಗಂತ ಡಿಜಿಟಲ್ ಡೆಸ್ಕ್:
ಈದ್ ಅಲಂಕಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದಲ್ಲಿನ ಅಹ್ಮದ್ ವೃತ್ತ, ಶಿವಪ್ಪ ನಾಯಕ ಪ್ರತಿಮೆ ಬಳಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ಕಟ್ಟಲಾಗಿದ್ದ ಬಾವುಟಗಳನ್ನು ತೆಗೆದಿರುವ ಸಲುವಾಗಿ ನಿನ್ನೆ ರಾತ್ರಿ 2 ಗುಂಪುಗಳ ನಡುವೆ ವಾಗ್ವಾದ ಉಂಟಾಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಧ್ಯ ಪ್ರವೇಶಿಸಿ, ಸಮಸ್ಯೆ ತಿಳಿಗೊಳಿಸಿದರು.
ಈ ಕುರಿತು ಮಾತನಾಡಿದ ಎಸ್ಪಿ..ʻ ಅಹ್ಮದ್ ವೃತ್ತ ಹಾಗೂ ಎಸ್.ಎನ್.ವೃತ್ತದಲ್ಲಿ ಅಲಂಕಾರ ವಿಚಾರವಾಗಿ ಕೆಲ ಭಿನ್ನಾಭಿಪ್ರಾಯಗಳಿದ್ದವು. ಸ್ಥಳದಲ್ಲಿ ಒಂದಷ್ಟು ಜನರ ನಡುವೆ ಮಾತಿನ ಚಕಮಕಿ ಶುರುವಾಗಿತ್ತು. ನಾನು ಹಾಗೂ ಇತರ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಎರಡೂ ಕಡೆಯ ಮುಖಂಡರು ಹಾಗೂ ಸಮಿತಿ ಸದಸ್ಯರೊಂದಿಗೆ ಮಾತನಾಡಿ ಸೌಹಾರ್ದಯುತವಾಗಿ ಭಿನ್ನಾಭಿಪ್ರಾಯ ಬಗೆಹರಿಸಿದ್ದೇವೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ, ಯಾವುದೇ ಸಮಸ್ಯೆಗಳಿಲ್ಲ. ಯಾವುದೇ ಸಮಸ್ಯೆಯಿದ್ದಲ್ಲಿ ತನಗೆ ತಿಳಿಸುವಂತೆʼ ಎಸ್ಪಿ ಮಿಥುನ್ ಕುಮಾರ್ ಸೂಚಿಸಿದರು.