ಹೊಸದಿಗಂತ ಡಿಜಿಟಲ್ ಡೆಸ್ಕ್ :
ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣೆ ಆಯೋಗವು ನೀಡಿದ ಬೆನ್ನಲ್ಲೇ ಉದ್ಧವ್ ಠಾಕ್ರೆ (Uddhav Thackeray) ಸುದ್ದಿಗೋಷ್ಠಿ ನಡೆಸಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿಗೂ ಮೊದಲು ಯಾವುದೇ ಕಾರಣಕ್ಕೂ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ನೀಡಬಾರದು ಎಂದು ಆಯೋಗಕ್ಕೆ ಮನವಿ ಮಾಡಿದ್ದೆವು. ಆದರೆ, ಇದೆಲ್ಲವನ್ನೂ ಮೀರಿ ಆಯೋಗವು ಏಕನಾಥ್ ಶಿಂಧೆ ಬಣಕ್ಕೆ ಹೆಸರು ಹಾಗೂ ಚಿಹ್ನೆ ನೀಡಿದೆ. ಶಾಸಕರು ಹಾಗೂ ಸಂಸದರ ಬಲದಿಂದ ಯಾವುದೇ ಪಕ್ಷವನ್ನು ನಿರ್ಧರಿಸುವುದಾದರೆ, ಯಾವುದೇ ಉದ್ಯಮಿಯು ಶಾಸಕರು ಹಾಗೂ ಸಂಸದರನ್ನು ಖರೀದಿಸಿ ಮುಖ್ಯಮಂತ್ರಿಯಾಗಬಹುದುಎಂದು ಹೇಳಿದರು.
ಇದೇ ವೇಳೆ ಚುನಾವಣೆ ಆಯೋಗದ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಠಾಕ್ರೆ ಘೋಷಿಸಿದ್ದಾರೆ.“ಖಂಡಿತವಾಗಿಯೂ ನಾವು ಚುನಾವಣೆ ಆಯೋಗದ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ. ನ್ಯಾಯಾಲಯವು ಚುನಾವಣೆ ಆಯೋಗದ ತೀರ್ಮಾನ ರದ್ದುಗೊಳಿಸಿ, ೧೬ ಶಾಸಕರನ್ನು ಅನರ್ಹಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.