ಹೊಸದಿಗಂತ ವರದಿ, ಅಂಕೋಲಾ
ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದ ದುಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮೃತ ದೇಹಗಳು ಪತ್ತೆಯಾಗಿವೆ.
ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೆಕೊಳ್ಳ ದುಬ್ಬನಸಸಿ ಕಡಲ ತೀರದಲ್ಲಿ ನಾಲ್ಕು ಮೃತ ದೇಹಗಳು ಪತ್ತೆಯಾಗಿದ್ದು , ಶಿರೂರಿನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ಬೊಮ್ಮಯ್ಯ ನಾಯ್ಕ, ಅವರ ಪತ್ನಿ ಶಾಂತಿ ಲಕ್ಷ್ಮಣ ನಾಯ್ಕ, ಮಗ ರೋಶನ ಲಕ್ಷ್ಮಣ ನಾಯ್ಕ ಜೊತೆಗೆ ಇನ್ನೊಂದು ಮೃತ ದೇಹ ಪತ್ತೆಯಾಗಿದ್ದು, ಯಾವುದೋ ಲಾರಿ ಚಾಲಕ ಇರಬಹುದು ಎಂದು ಅಂದಾಜಿಸಲಾಗಿದೆ.
ಘಟನೆಯಲ್ಲಿ ಶಿರೂರಿನ ಒಂದೇ ಕುಟುಂಬದ ಐದು ಜನರು ಕಣ್ಮರೆಯಾಗಿರುವುದು ಖಚಿತವಾಗಿತ್ತು ಅಲ್ಲದೇ ಇನ್ನೂ ಕೆಲವು ಜನ ಮಣ್ಣಿನ ಅಡಿ ಸಿಲುಕಿರಬಹುದು ಅಥವಾ ನೀರಿನಲ್ಲಿ ಕೊಚ್ಚಿ ಹೋಗಿರುವ ಊಹೆ ಮಾಡಲಾಗಿತ್ತು.
ಗುಡ್ಡ ಕುಸಿದು ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ್ ಅವರು ಭೇಟಿ ನೀಡಿ ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಒಂದು ಮನೆಯ ಐದು ಜನರು ಸೇರಿದಂತೆ ಒಟ್ಟು ಏಳು ಜನರು ಮೃತ ಪಟ್ಟಿರುವ ಸಾಧ್ಯತೆಗಳು ಇದ್ಧು , ಚಹಾ ಹೋಟೆಲ್ ಬಳಿ ಎಷ್ಟು ಜನರು ಇದ್ದರು ಎನ್ನುವುದು ಇದುವರೆಗೆ ಖಚಿತವಾಗಿಲ್ಲ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ವರಿಷ್ಠ ಎಂ.ನಾರಾಯಣ ತಿಳಿಸಿದ್ದಾರೆ.