ಹೊಸದಿಗಂತ ಅಂಕೋಲಾ:
ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದ ದುರಂತದಲ್ಲಿ ಗಂಗಾವಳಿ ನದಿ ನೀರಿನಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಲಾರಿ ಮತ್ತಿತರ ವಾಹನಗಳು ಮತ್ತು ಕಣ್ಮರೆಯಾದ ಮೂವರ ಪತ್ತೆಗೆ ನದಿ ನೀರಿನಲ್ಲಿ ಶೋಧ ಕಾರ್ಯಾಚರಣೆ 12 ನೇ ದಿನವೂ ಮುಂದುವರಿದಿದ್ದು ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ.
ಈಶ್ವರ ಮಲ್ಪೆ ಮತ್ತು 8 ಜನ ಜೊತೆಗಾರರ ತಂಡ ಶಿರೂರಿನಲ್ಲಿ ಪರಿಶೀಲನೆ ನಡೆಸುತ್ತಿದ್ದು ನೌಕಾನೆಲೆ ತಜ್ಞರು, ಎನ್. ಡಿ.ಆರ್. ಎಫ್ ಮಾರ್ಗದರ್ಶನದಲ್ಲಿ ಶೋಧ ಕಾರ್ಯಾಚರಣೆಗೆ ಇಳಿಯಲಿದ್ಧಾರೆ. ನೌಕಾಪಡೆಯ ಟಗ್ ಯಂತ್ರವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವ ಸಾಧ್ಯತೆಗಳಿದ್ದು ಸ್ಥಳೀಯ ಮೀನುಗಾರರು ಸಹ ಸಹಕಾರ ನೀಡಲಿದ್ದಾರೆ.
ಘಟ್ಟದ ಮೇಲ್ಬಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಗಂಗಾವಳಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿದ್ದು ಮಣ್ಣು ಮಿಶ್ರಿತ ಕೆಂಪು ನೀರು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು ಇಂದು ಸತತ ಪ್ರಯತ್ನಗಳು ನಡೆಯಲಿವೆ.