ಶಿರೂರು ಗುಡ್ಡ ಕುಸಿತ ದುರಂತ: ಲಾರಿಯಲ್ಲೇ ಪತ್ತೆಯಾಯಿತು ಚಾಲಕ ಅರ್ಜುನ್‌ ಮೃತದೇಹ

ಹೊಸದಿಗಂತ ವರದಿ ಅಂಕೋಲಾ:

ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಕಣ್ಮರೆಯಾಗಿದ್ದ ಕೇರಳದ ಭಾರತ್ ಬೆಂಜ್ ಲಾರಿ ಮೂರನೇ ಹಂತದ ಶೋಧ ಕಾರ್ಯಾಚರಣೆಯ ಆರನೇ ದಿನ ಪತ್ತೆಯಾಗಿದ್ದು ಲಾರಿಯಲ್ಲಿ ಅರ್ಜುನ್ ಮೃತ ದೇಹ ಸಹ ಇರುವುದಾಗಿ ತಿಳಿದು ಬಂದಿದೆ.

ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ಅವರು ನೀಡಿದ್ದ ನಿರ್ದೇಶನದಂತೆ ಶಿರೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಕ್ಷ್ಮಣ ನಾಯ್ಕ ಅವರ ಅಂಗಡಿ ಇದ್ದ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಿ ಕೇರಳದ ಭಾರತ್ ಬೆಂಜ್ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಶೋಧ ಕಾರ್ಯ ನಡೆಸುತ್ತಿರುವ ತಂಡ ಯಶಸ್ವಿಯಾಗಿದೆ.

ಶಿರೂರು ಗುಡ್ಡ ಕುಸಿತ ಸಂಭವಿಸಿ ಎರಡು ತಿಂಗಳು ಕಳೆದರೂ ಕೇರಳದ ಲಾರಿ ಹುಡುಕಾಟ ರಕ್ಷಣಾ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೇರಳ ಸರ್ಕಾರದ ಸಚಿವರು, ಶಾಸಕರು, ಸಂಸದರು ಮತ್ತು ಸಾಕಷ್ಟು ಪ್ರಮಾಣದಲ್ಲಿ ಮಾದ್ಯಮ ಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಪ್ರತಿ ಬಾರಿಯ ಕಾರ್ಯಾಚರಣೆ ಸಂದರ್ಭದಲ್ಲಿ ಆಗಮಿಸಿ ಕೇರಳದ ಲಾರಿಯ ಪತ್ತೆಗೆ ಒತ್ತಡ ಹಾಕುತ್ತಿರುವುದು ಕಂಡು ಬಂದಿತ್ತು.

ಇದೀಗ ಗಂಗಾವಳಿ ನದಿಯಲ್ಲಿ ಕೇರಳದ ಭಾರತ್ ಬೆಂಜ್ ಲಾರಿ ಪತ್ತೆಯಾಗಿದ್ದು ಡ್ರೆಜ್ಜರ್ ಯಂತ್ರದ ಮೂಲಕ ಲಾರಿಯನ್ನು ಮೇಲೆತ್ತುವ ಕೆಲಸ ಸಾಗಿದೆ. ಈ ಕುರಿತು ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!