ಹೊಸದಿಗಂತ ವರದಿ, ಶಿವಮೊಗ್ಗ:
ಕಳೆದ ಒಂಭತ್ತು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿದ್ದ ಶಿವಮೊಗ್ಗ ದಸರಾ ಉತ್ಸವ ಚಾಮುಂಡೇಶ್ವರಿ ದೇವಿಯ ಅದ್ಧೂರಿ ಅಂಬಾರಿ ಮೆರವಣಿಗೆ ಹಾಗೂ ತಹಶೀಲ್ದಾರ್ ಡಾ.ಎನ್.ಜೆ. ನಾಗರಾಜ್ ಬುಧವಾರ ಸಂಜೆ ಪ್ರೀಡಂ ಪಾರ್ಕ್ನಲ್ಲಿ ಬನ್ನಿ ಮುಡಿಯುವ ಮೂಲಕ ಸಂಪನ್ನಗೊಂಡಿತು.
ಎಸ್ಪಿಎಂ ರಸ್ತೆಯಲ್ಲಿರುವ ಶಿವಪ್ಪನಾಯಕ ಅರಮನೆಯಲ್ಲಿ ಜಿಲ್ಲಾಕಾರಿ ಡಾ. ಆರ್. ಸೆಲ್ವ ಮಣಿ ನಂದಿ ಧ್ವಜ ಕ್ಕೆ ಪೂಜೆ ಸಲ್ಲಿಸಿದರು. ಮೇಯರ್ ಸುನೀತಾ ಅಣ್ಣಪ್ಪ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಯನ್ನು ಉದ್ಘಾಟಿಸಿದರು.
ಶಿವಪ್ಪನಾಯಕ ಅರಮನೆಯಿಂದ ಆರಂಭವಾದ ಆನೆ ಅಂಬಾರಿ ಮೆರವಣಿಗೆ ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ಸರ್ಕಲ್ ಮೂಲಕ ಲಕ್ಷ್ಮೀ ಚಿತ್ರಮಂದಿರ ವೃತ್ತದಿಂದ ಫ್ರೀಡಂ ಪಾರ್ಕ್ .ಪ್ರವೇಶಿಸಿತು.
ಅಲಂಕೃತ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಗಜಪಡೆಯೊಂದಿಗೆ ಮೆರವಣಿಯಲ್ಲಿ ಮಂಗಳ ವಾದ್ಯ, ವೀರಗಾಸೆ, ಮಹಿಳಾ ತಂಡದ ಡೊಳ್ಳುಘಿಕುಣಿತ, ಚಂಡೆ ವಾದನ, ತಟ್ಟಿರಾಯ, ಯಕ್ಷಗಾನ, ಕೀಲು ಕುದುರೆ ನೃತ್ಯ, ನಗಿಸುವ ಗೊಂಬೆಗಳ ಕುಣಿತ, ಕಥಕ್ಕಳಿ, ಕೋಲಾ ಹೀಗೆ ಹತ್ತಾರು ಕಲಾ ತಂಡಗಳು ಪಾಲ್ಗೊಳ್ಳುವ ಮೂಲಕ ರಂಗು ಮೂಡಿಸಿದವು. ನೂರಕ್ಕೂ ಹೆಚ್ಚು ದೇವಾನುದೇವತೆಗಳು ಅಲಂಕೃತ ಪಲ್ಲಕ್ಕಿಯಲ್ಲಿ ಪಾಲ್ಗೊಂಡಿದ್ದು, ಟ್ರ್ಯಾಕ್ಟರ್ ಮೆರವಣಿಗೆ ಜನರ ಗಮನ ಸೆಳೆಯಿತು.