ಹೊಸದಿಗಂತ ವರದಿ ಶಿವಮೊಗ್ಗ:
ನಗರದ ರಾಗಿಗುಡ್ಡದಲ್ಲಿ ಈದ್ ಮೆರವಣಿಗೆ ವೇಳೆ ನಡೆದಿರುವ ಕಲ್ಲು ತೂರಾಟ ಪ್ರಕರಣದ ಹಿಂದೆ ನಿಷೇಧಿತ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ನಂಟಿದೆ. ಹಾಗಾಗಿ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಿಷೇಧಿತ ಪಿಎಫ್ಐನ 07 ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರೇರಣೆ ನೀಡಿದ್ದಾರೆ. ಅದರಲ್ಲಿ ಮೂವರನ್ನು ಪೊಲೀಸರು ಬಂಸಿದ್ದಾರೆ. ಇನ್ನುಳಿದ ನಾಲ್ವರು ನಾಪತ್ತೆ ಆಗಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದರು.
ಹಿದಾಯತ್, ಅನ್ವರ್ ಹಾಗೂ ಮುಬಾರಕ್ ಅವರುಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಇರ್ಫಾನ್, ನಭಿ ಮತ್ತು ಅಬ್ದುಲ್ಲಾ ನಾಪತ್ತೆ ಆಗಿದ್ದಾರೆ. ಘಟನೆ ಬಳಿಕ ಗುಪ್ತಚರ ಇಲಾಖೆ ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನೂ ತಪ್ಪಿತಸ್ಥರು ಇದ್ದರೆ ಅವರನ್ನೂ ಬಂಧಿಸಬೇಕು. ಘಟನೆ ಹಿಂದೆ ಯಾರ್ಯಾರು ಇದ್ದಾರೆ, ಇದರ ಮೂಲ ಪತ್ತೆ ಮಾಡಲು ಎನ್ಐಎ ತನಿಖೆಗೆ ರಾಜ್ಯ ಸರ್ಕಾರ ಕೂಡಲೇ ಒಪ್ಪಿಸಬೇಕು ಎಂದು ಆಗ್ರಹಿಸಿದರು.