ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಮಹಾಶಿವರಾತ್ರಿಯ ಸಡಗರ ಮನೆಮಾಡಿದೆ. ಫೆಬ್ರವರಿ 15ರ ಭಾನುವಾರ ನಡೆಯಲಿರುವ 33ನೇ ವರ್ಷದ ಈ ಬೃಹತ್ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸದ್ಗುರುಗಳ ನೇತೃತ್ವದಲ್ಲಿ ನಡೆಯುವ ಈ ಸಂಭ್ರಮದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಎಲ್. ಮುರುಗನ್ ಸೇರಿದಂತೆ ದೇಶದ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ನೀಡಲಿದ್ದಾರೆ.
ಈ ಬಾರಿಯ ವಿಶೇಷತೆಗಳೇನು?
ಇದೇ ಮೊದಲ ಬಾರಿಗೆ ಸದ್ಗುರುಗಳು ಸಾರ್ವಜನಿಕವಾಗಿ ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ನೆರವೇರಿಸಲಿದ್ದಾರೆ.
ದೈವಿಕ ಸ್ತ್ರೀಶಕ್ತಿಯನ್ನು ಆರಾಧಿಸುವ ಭವ್ಯ ಮೆರವಣಿಗೆಯು ಭಕ್ತರ ಕಣ್ಮನ ಸೆಳೆಯಲಿದೆ.
112 ಅಡಿಯ ಆದಿಯೋಗಿ ಪ್ರತಿಮೆಯ ಮೇಲೆ ಅದ್ಭುತವಾದ ‘ಬೆಳಕು ಮತ್ತು ಧ್ವನಿ’ ಪ್ರದರ್ಶನ ನಡೆಯಲಿದ್ದು, ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ.
ರಾತ್ರಿಯಿಡೀ ನಡೆಯುವ ಸಂಗೀತ ಕಚೇರಿಗಳು ಮತ್ತು ಸದ್ಗುರುಗಳ ಮಾರ್ಗದರ್ಶನದ ಧ್ಯಾನವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡಲಿವೆ.
ಈ ಬೃಹತ್ ಸಮಾರಂಭವು ವಿಶ್ವದಾದ್ಯಂತ ಸುಮಾರು 23 ಭಾಷೆಗಳಲ್ಲಿ, 100ಕ್ಕೂ ಹೆಚ್ಚು ಟಿವಿ ಚಾನಲ್ಗಳು ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ನೇರ ಪ್ರಸಾರವಾಗಲಿದೆ. ಅಂದಾಜು 140 ಮಿಲಿಯನ್ ಜನ ವೀಕ್ಷಕರು ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.



