ಹೊಸದಿಗಂತ ವರದಿ ಶಿವಮೊಗ್ಗ:
ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ನಡುವೆ ಆರೋಪ ಪ್ರತ್ಯಾರೋಪಗಳು ಕೂಡ ನಡೆಯುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ತವರು ಮನೆಯಾಗಿದೆ ಎಂದು ಟೀಕಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಕುರ್ಚಿ ಎಂದರೆ ಅದು ನೆಹರೂ ಕುಟುಂಬದ ಖುರ್ಚಿ ಎಂದು ಕಾಂಗ್ರೆಸ್ ಭಾವಿಸಿದೆ. ಇದನ್ನು ಹೋಗಲಾಡಿಸಿ ಕಳೆದ 9 ವರ್ಷಗಳಿಂದ ಜನಪರ ಆಡಳಿತ ನಡೆಸುತ್ತಿರುವ ಮೋದಿಯವರ ಜನಪ್ರಿಯತೆ ಸಹಿಸದೆ ಕಾಂಗ್ರೆಸ್ ನಾಯಕರು ಅವಹೇಳನ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗಿದೆ. ಜನರ ಜೀವನಮಟ್ಟ ಸುಧಾರಣೆಯಾಗಿದೆ.
ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ತಂದೆ-ತಾಯಿ ಕಾಂಗ್ರೆಸ್. ಕೇಂದ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು, ತರಂಗಾಂತರ ಹಂಚಿಕೆ ಮೊದಲಾದವುಗಳಲ್ಲಿ ಕೋಟ್ಯಾಂತರ ಹಣ ಲೂಟಿಯಾಗಿತ್ತು. ವಿದೇಶಗಳೊಂದಿಗಿನ ಬಾಂಧವ್ಯ ಕೂಡ ಸರಿ ಇರಲಿಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಮುಚ್ಚಿದ್ದು ಸಿದ್ದರಾಮಯ್ಯ ಸರ್ಕಾರ. ಅದನ್ನು ಬಲಪಡಿಸಿದ್ದು ಯಡಿಯೂರಪ್ಪ ಸರ್ಕಾರ ಎಂದರು.