ಹೊಸದಿಗಂತ, ಮಂಗಳೂರು:
ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಕಾಸರಗೊಡು ಜಿಲ್ಲೆಯ ಪೈವಳಿಕೆ ಚೇವಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಕತ್ತಿನಿಂದ ಚಿನ್ನದ ಸರ ಸೆಳೆದು ಪರಾರಿಯಾದ ಘಟನೆ ನಡೆದಿದ್ದು, ಹಾಡಹಗಲೇ ನಡೆದ ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಗೋಪಾಲ ಕೃಷ್ಣ ಭಟ್ ಎಂಬವರು ತಮ್ಮ ಮನೆ ಸಮೀಪದಲ್ಲೇ ಇರುವ ಕೃಷಿ ಭೂಮಿಯತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅವರಲ್ಲಿ ದಾರಿ ಕೇಳುವ ನೆಪದಲ್ಲಿ ಹತ್ತಿರ ಬಂದಿದ್ದು, ಓರ್ವ ಮಾತನಾಡಿಸುತ್ತಿದ್ದಂತೆಯೇ ಇನ್ನೋರ್ವ ಅವರ ಕತ್ತಿನಿಂದ ಸರ ಸೆಳೆದು ಬಳಿಕ ಇಬ್ಬರೂ ಬೈಕೇರಿ ಮಿಂಚಿನ ವೇಗದಲ್ಲಿ ಮರೆಯಾಗಿದ್ದಾರೆ. ಈ ಸಂದರ್ಭ ಭಟ್ ಅವರನ್ನು ಬೆನ್ನತ್ತಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ. ಈ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಕುಂಬಳೆ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.