ಹೊಸದಿಗಂತ ವರದಿ ಮಡಿಕೇರಿ:
ಆಹಾರ ಅರಸಿ ಕಾಫಿ ತೋಟಕ್ಕೆ ಬಂದ ಕಾಡಾನೆಯೊಂದು ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾದ ಘಟನೆ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ನಡೆದಿದೆ.
ಕಾಡಾನೆ ಹಾವಳಿ ತಡೆಗೆ ಹಾಕಲಾದ ಸೋಲಾರ್ ತಂತಿ ಬೇಲಿಯಲ್ಲಿ ಅಧಿಕ ವಿದ್ಯುತ್ ಪ್ರವಹಿಸಿ ಸುಮಾರು 36 ವರ್ಷ ಪ್ರಾಯದ ಗಂಡಾನೆ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ. ಮಾಹಿತಿ ಅರಿತ ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ವಿದ್ಯುತ್ ಮಾರ್ಗದ ತಂತಿ ತಗುಲಿ ಕಾಡಾನೆ ಸಾವಿಗೀಡಾಗಿಲ್ಲ. ಸೋಲಾರ್ ತಂತಿ ಬೇಲಿಗೆ ಅಕ್ರಮ ವಿದ್ಯುತ್ ಹರಿಸಿದ ಪರಿಣಾಮ ಅದು ಸಾವಿಗೀಡಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟ ಕಾರ್ಮಿಕನೊಬ್ಬನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಆಧರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಾವಿಗೀಡಾದ ಆನೆಯ ಮರಣೋತ್ತರ ಪರೀಕ್ಷೆಗೆ ಹಾಗೂ ಅದರ ಅಂತಿಮ ಸಂಸ್ಕಾರಕ್ಕೆ ತೋಟ ಮಾಲಕರು ಅಡ್ಡಿಪಡಿಸಿದ ಘಟನೆಯೂ ನಡೆದಿದ್ದು, ಬಳಿಕ ಜೆಸಿಬಿ ಬಳಸಿ ಕಾಡಾನೆಯ ಕಳೇಬರವನ್ನು ಲಾರಿಯಲ್ಲಿ ಸಮೀಪದ ಅರಣ್ಯಕ್ಕೆ ಕೊಂಡೊಯ್ದು ದಫನ ಮಾಡಲಾಯಿತು.
ಈ ಸಂದರ್ಭ ಎಸಿಎಫ್ ಗೋಪಾಲ್, ಆರ್ ಎಫ್ ಒ ರತನ್ ಕುಮಾರ್, ಡಿಆರ್ ಎಫ್ಒ ಸುಬ್ರಾಯ, ವನ್ಯಜೀವಿ ವೈದ್ಯ ಚಿಟ್ಟಿಯಪ್ಪ, ಪಶುವೈದ್ಯ ಶಿಂಧೆ ಹಾಜರಿದ್ದರು.