ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆ ದೂಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಿನ್ನಿಗೋಳಿ ಸಮೀಪದ ಪದ್ಮನೂರು ಶೆಟ್ಟಿಗಾಡುನಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಹಿತೇಶ್ ಶೆಟ್ಟಿಗಾರ್ ತನ್ನ ಮನೆ ಪಕ್ಕದ ಮೂಲ್ಕಿ ಕಿನ್ನಿಗೋಳಿ ಮುಖ್ಯ ರಸ್ತೆ ಬದಿಯಲ್ಲಿ ತೆಂಗಿನಕಾಯಿ, ಹಲಸು ವ್ಯಾಪಾರ ಮಾಡುತ್ತಿದ್ದು , ಪತ್ನಿ ಲಕ್ಷೀ ಬೀಡಿ ಕಟ್ಟುತ್ತಿದ್ದು ಕಳೆದ ಒಂದು ವಾರದಿಂದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.
ಗುರುವಾರ ಬೆಳಿಗ್ಗೆ ಎಂದಿನಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸಾಗುತ್ತಿದ್ದಾಗ ಗಂಡ ಹಿತೇಶ್ ಶೆಟ್ಟಿಗಾರ್ ಬಳಿ ಮಕ್ಕಳು ಎಲ್ಲಿ ಎಂದು ವಿಚಾರಿಸಿದಾಗ, ಎಲ್ಲೋ ಅಡಗಿರಬಹುದು ಎಂದು ಹೇಳಿದ್ದಾನೆ. ಮನೆಯಲ್ಲಿ ಹುಡುಕಿ ಸಿಗದಿದ್ದಾಗ ಸಮೀಪದ ಮನೆಯ ಬಾವಿ ಕಡೆ ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳು ನೀರಿನಲ್ಲಿ ಕಂಡು ರಕ್ಷಣೆಗೆ ಮುಂದಾದಾಗ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಪತ್ನಿಯನ್ನೂ ಬಾವಿಗೆ ದೂಡಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ,
ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್(46) ಎಂಬಾತ ಮೊದಲು ತನ್ನ ಮಕ್ಕಳಾದ ರಶ್ಮಿತಾ,(13) ಉದಯ (11), ದಕ್ಷ(4) ಎಂಬವರನ್ನು ಬಾವಿಗೆಸೆದು ಬಳಿಕ ಪತ್ನಿ ಲಕ್ಷ್ಮಿ( 38)ಎಂಬವರನ್ನು ಬಾವಿಯೊಳಗೆ ದೂಡಿ ತಾನು ಆತ್ಮಹತ್ಯೆಗೆ ಯತ್ನಿಸಿ ಬಾವಿಗೆ ಹಾರಿದ್ದಾನೆ.
ಪತ್ನಿ ಲಕ್ಷ್ಮಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೂಗಿದಾಗ ರಸ್ತೆಬದಿಯಲ್ಲಿ ಹೂ ಮಾರುವವವರು ಮತ್ತು ಇಬ್ಬರು ಬಾವಿಯ ಬಳಿ ಬಂದು ಹಿತೇಶ್ ಮತ್ತು ಲಕ್ಷೀ ಅವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಕೂಡಲೇ ಮೂಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕದಳ ಸಹಾಯದಿಂದ ಮೂಲ್ಕಿ ಪೋಲಿಸರು ಮೂವರೂ ಮಕ್ಕಳನ್ನು ಮೇಲೆಕೆತ್ತಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಅಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಮೃತಪಟ್ಟಿದ್ದಾರೆ.