ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಪುತ್ತೂರಿಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪಿ. ಶ್ರವಣ್ ಕುಮಾರ್ ಪ್ರಭಾರವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಳೆದ ಜೂನ್ 1ರಿಂದ ಕರ್ತವ್ಯದಲ್ಲಿರುವ ಪಿ. ಶ್ರವಣ್ ಕುಮಾರ್ ಅವರು 2023ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಬೆಂಗಳೂರಿನ ಆರ್.ವಿ.ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ಇವರು ಆ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು.
ಭಾರತೀಯ ರಕ್ಷಣಾ ಇಲಾಖೆಯ ರಾಜ್ಯ ಸೇವೆಯಲ್ಲಿ ತರಬೇತಿಯನ್ನೂ ಪಡೆದುಕೊಂಡಿದ್ದರು. ಇದಕ್ಕೂ ಮೊದಲು ಅವರು ಐಆರ್ಎಸ್ನಲ್ಲಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಐಎಎಸ್ ಗೆ ಆಯ್ಕೆಯಾದರು. ಇವರು ರಾಯಚೂರಿನ ಕಲ್ಲೂರು ಗ್ರಾಮದವರು. ಇದೀಗ ಪುತ್ತೂರು ಉಪವಿಭಾಗದ ಪ್ರೊಬೇಷನರಿ ಎಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಹಿರಿಯ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅಧಿಕಾರ ಹಸ್ತಾಂತರಿಸಿದರು. ಜುಬಿನ್ ಮೊಹಪಾತ್ರ ಅವರನ್ನು ರಾಯಚೂರು ನಗರ ಪಾಲಿಕೆ ಆಯುಕ್ತರಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ.