ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ 3 ನಿಮಿಷಗಳಲ್ಲಿ ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕಗಳನ್ನು ಸಂಸ್ಕೃತದಲ್ಲಿ ಬರೆದು ಕಾಸರಗೋಡು ಜಿಲ್ಲೆಯ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ವಿಶ್ವದಾಖಲೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.
ಇಂಟರ್ನ್ಯಾಷನಲ್ ಬುಕ್ ಆಪ್ ರೆಕಾರ್ಡ್ ಅಮೃತಸರ ಪಂಜಾಬ್ ಸಂಸ್ಥೆಯವರ ಅನುಮೋದನೆ ಮೇರೆಗೆ 100 ಮಂದಿ ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರು 7 ಶ್ಲೋಕದಂತೆ ಗಣ್ಯರ ಸಮಕ್ಷಮದಲ್ಲಿ ಬರೆದರು. ತನ್ಮೂಲಕ 20 ಅಡಿ ಎತ್ತರ 12 ಅಡಿ ಅಗಲದ ಕೃಷ್ಣನ ಚಿತ್ರದ ಭಗವದ್ಗೀತೆಯ ಪುಟಗಳನ್ನು ಅನಾವರಣಗೊಳಿಸಿದರು. ಸಂಸ್ಕೃತ ಲಿಪಿಯಲ್ಲಿಯೇ ೩ ನಿಮಿಷಗಳಲ್ಲಿ ಮನನ ಮಾಡುತ್ತಾ ವಿಶ್ವದಾಖಲೆಯತ್ತ ಸಂಚರಿಸಿ ಶ್ರೀಕೃಷ್ಣನ ವಿರಾಟ ಸ್ವರೂಪಕ್ಕೆ ಸಾಕ್ಷಿಯಾದರು. ಶಾಲಾ ಸಭಾಂಗಣದಲ್ಲಿ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯ ಸೀನಿಯರ್ ಸುಪರಿಂಟೆಂಡೆಂಟ್ ಕರುಣಾಕರ ಬಿ. ಅವರ ಮೇಲ್ನೋಟದಲ್ಲಿ ದಾಖಲೀಕರಣ ನಡೆಯಿತು.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮತ್ತು ಬಳಗ ಸೇರಿ ಈ ವಿಶ್ವದಾಖಲೆ ವಿನ್ಯಾಸವನ್ನು ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಅವರ ನೇತೃತ್ವದಲ್ಲಿ ಶಿಕ್ಷಕ ವೃಂದದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ್ ಪಜಿಲ, ಆಡಳಿತ ಮಂಡಳಿ ಸದಸ್ಯ ಮಧುಸೂದನ ತಿಮ್ಮಕಜೆ, ಪತ್ರಕರ್ತರು ಉಪಸ್ಥಿತರಿದ್ದರು.