ಹೊಸದಿಗಂತ ವರದಿ, ಕಲಬುರಗಿ:
ಕಲ್ಯಾಣ ನಾಡಿನ ಆರಾಧ್ಯ ದೈವ, ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವದ ಮುನ್ನಾ ದಿನವಾದ ಶುಕ್ರವಾರ ಸಾಯಂಕಾಲ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಉಚ್ಚಾಯಿ ರಥೋತ್ಸವ ಜರುಗಿತು.
ಶುಕ್ರವಾರ ಬೆಳಗ್ಗೆಯಿಂದಲೇ ದಂಡು ದಂಡಾಗಿ ಜನರು ನಗರದ ಶ್ರೀ ಶರಣಬಸವೇಶ್ವರರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಿ, ಶರಣರ ಗದ್ದುಗಗಗೆ ಮಹಾ ಅಭಿವೃದ್ಧಿ, ರುದ್ರಾಭಿಷೇಕ ಗೈದರು. ಬಳಿಕ ಸಾಯಂಕಾಲ ಜಿಲ್ಲೆ ಹಾಗೂ ನಾನಾ ಭಾಗದಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಖಾರಿಖು, ನಾರನ್ನು ಭಕ್ತಿಪೂರ್ವಕವಾಗಿ ಉಚ್ಚಾಯಿ ರಥೋತ್ಸವದ ಮೇಲೆ ಎಸೆಯುವ ಮೂಲಕ ಭಕ್ತಗಣ ಸಾಕ್ಷಿಯಾಯಿತು.
ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶದ ಹಾಗೂ ಜಿಲ್ಲೆಯ ಸುತ್ತ ಮುತ್ತಲಿನ ಸಾವಿರಾರು ಭಕ್ತರು, ಕಾಲ್ನಡಿಗೆಯಲ್ಲಿ ಶ್ರೀ ಶರಣಬಸವೇಶ್ವರರ ಸನ್ನೀಧಿಗೆ ಭಜನೆ, ಗೀಗಿ ಪದ, ತತ್ವಪದಗಳನ್ನು ಹಾಡುತ್ತಾ ಆಗಮಿಸಿದದರು. ಇನ್ನೂ, ಐತಿಹಾಸಿಕ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ರಥೋತ್ಸವವು ಶನಿವಾರ ಸಾಯಂಕಾಲ 6 ಗಂಟೆಗೆ ನೆರವೆರಲಿದ್ದು, ಸಂಸ್ಥಾನದ ಎಂಟನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪಾ ಅಪ್ಪಜೀ ಅವರು ಪರಷು ಬಟ್ಟಲು ಪ್ರದರ್ಶನದ ಬಳಿಕ ರಥೋತ್ಸವ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಶರಣನ ಭಕ್ತರು ದೇವಸ್ಥಾನ ಸುತ್ತಮುತ್ತ ಬಿಡು ಬಿಟ್ಟಿದ್ದಾರೆ.