ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸದ್ಯದ ಪರಿಸ್ಥಿತಿ ನೋಡಿದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಸಿಎಂ ಮಾಡಬಾರದು ಎಂಬ ಶಪಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಅವರ ಬೆಂಬಲಿಗರ ಅಜೆಂಡಾ ಸಹ ಅದೇ ಆಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಸಹ ನಡೆಯುತ್ತಿಲ್ಲ. ಪಕ್ಷದಲ್ಲಿ ಆಂತರಿಕ ಕಚ್ಚಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಗಂಡಾಂತರ ಎದುರಿಸುತ್ತಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದರು.
ಕಾಂಗ್ರೆಸ್ ನಲ್ಲಿ ಒಳಜಗಳ ಹೆಚ್ಚಾಗಿದ್ದು, ರಾಜ್ಯ ಬಹಳಷ್ಟು ಬಳಲುತ್ತಿದೆ. ರಾಜ್ಯ ಅಭಿವೃದ್ಧಿ ಪಥದತ್ತ ಸಾಗಬೇಕಾಗಿತ್ತು. ಸಚಿವರು ಅಭಿವೃದ್ಧಿ ಬಗ್ಗೆ ಯೋಚಿಸಬೇಕು. ಇದೆಲ್ಲವನ್ನೂ ಬಿಟ್ಟು ಸಿಎಂ ಯಾರನ್ನು ಮಾಡಬೇಕು. ಯಾರನ್ನು ತೆಗೆಯಬೇಕು ಎಂಬ ಯೋಚನೆಯಲ್ಲಿ ಇದ್ದಾರೆ. ಸಿಎಂ ಸೇರಿದಂತೆ ಇಡೀ ಮಂತ್ರಿ ಮಂಡಲ ಇದರಲ್ಲಿ ತೊಡಗಿಕೊಂಡಿದೆ ಎಂದು ಹರಿಹಾಯ್ದರು.
ಅಭಿವೃದ್ಧಿ ಬಗ್ಗೆ ಯಾರು ಸಹ ಮಾತನಾಡುತ್ತಿಲ್ಲ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂದು ಹೇಳಲಾಗುತ್ತಿತ್ತಯಮ ಆದರೆ ಈಗ ನಾಲ್ಕೈದು ಬಾಗಿಲಗಳು ಆಗಿವೆ ಎಂದು ವ್ಯಂಗ್ಯವಾಡಿದರು.