ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ದೇಶದ ಜಾಗೃತ ಯುವಜನತೆ ಮತ್ತು ವಿದ್ಯಾರ್ಥಿ ಸಮುದಾಯದ ಐತಿಹಾಸಿಕ ಗೆಲುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದ ಮೌಲ್ಯಗಳಿಗೆ ಸಿಕ್ಕ ದೊಡ್ಡ ವಿಜಯ ಇದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ದೆಹಲಿ ಹೋರಾಟಗಾರರಿಗೆ ಹೃತ್ಪೂರ್ವಕ ಅಭಿನಂದನೆ
ಪ್ರತಿಕೂಲ ಹವಾಮಾನ, ಹಸಿವು ಹಾಗೂ ಪೊಲೀಸ್ ಕಿರುಕುಳಗಳನ್ನು ಎದುರಿಸಿ ದೆಹಲಿಯಲ್ಲಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿದ ಲಕ್ಷಾಂತರ ಯುವಕರನ್ನು ಅವರು ಶ್ಲಾಘಿಸಿದ್ದಾರೆ. ಈ ಅಹಿಂಸಾತ್ಮಕ ಪ್ರತಿಭಟನೆಯು ಇಡೀ ದೇಶದಲ್ಲಿ ಭರವಸೆಯ ಹೊಸ ಬೆಳಕನ್ನು ಚೆಲ್ಲಿದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ನಾಯಕತ್ವಕ್ಕೆ ಸಿದ್ದರಾಮಯ್ಯ ಮೆಚ್ಚುಗೆ
ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದೆ ಎಂದಿರುವ ಅವರು, ಈ ಹೋರಾಟಕ್ಕೆ ಸೂಕ್ತ ಸಮಯದಲ್ಲಿ ದೃಢ ನಾಯಕತ್ವ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೂಲ ಸಮಸ್ಯೆಗೆ ಪರಿಹಾರ ಅಗತ್ಯ
ಕೇವಲ ಸಚಿವರ ರಾಜೀನಾಮೆಯಿಂದ ಶಿಕ್ಷಣ ರಂಗದ ಸವಾಲುಗಳು ಬಗೆಹರಿಯುವುದಿಲ್ಲ ಎಂದು ಎಚ್ಚರಿಸಿದ ಸಿಎಂ, ಸರ್ವಾಧಿಕಾರಿ ಮನಸ್ಥಿತಿಯ ಮುಖ್ಯಸ್ಥರು ಅಧಿಕಾರದಲ್ಲಿದ್ದಾಗ, ಸಚಿವರು ಬದಲಾದ ತಕ್ಷಣ ವ್ಯವಸ್ಥೆ ಸುಧಾರಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



