ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜನಪ್ರಿಯ ಪಂಜಾಬಿ ಗಾಯಕ ಜೆನ್ನಿ ಜೊಹಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಗಾಯಕನನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಇತ್ತೀಚೆಗೆ, ಸಿಧು ಮೂಸೆವಾಲಾಗೆ ನ್ಯಾಯ ಕೋರಿ ಜೋಹಾಲ್ ಅವರ ಹೊಸದಾಗಿ ಬಿಡುಗಡೆಯಾದ ಲೆಟರ್ ಟು ಸಿಎಂ ಹಾಡು ಹೆಚ್ಚು ಜನಪ್ರಿಯತೆ ಗಳಿಸಿತ್ತು.
ಇದಕ್ಕೂ ಮುನ್ನ ಎನ್ಐಎ ದೆಹಲಿಯ ಪ್ರಧಾನ ಕಛೇರಿಯಲ್ಲಿ ಖ್ಯಾತ ಗಾಯಕರಾದ ಅಫ್ಸಾನ್ ಖಾನ್, ದಲ್ಪ್ರೀತ್ ದಿಲ್ಲನ್ ಮತ್ತು ಮಂಕಿರತ್ ಔಲಕ್ ಅವರನ್ನು ವಿಚಾರಣೆ ನಡೆಸಿತ್ತು. ದಲ್ಪ್ರೀತ್ ದಿಲ್ಲನ್ ಮತ್ತು ಮಂಕಿರತ್ ಔಲಕ್ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ.
ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂತೆಗೆದುಕೊಂಡ ನಂತರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಂದರು.
ನಂತರ, ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಸಿಧು ಮೂಸ್ ವಾಲಾ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬ್ರಾರ್, ದರೋಡೆಕೋರ ವಿಕ್ಕಿ ಮಿದ್ದುಖೇರಾ ಸಾವಿನ ಸೇಡು ತೀರಿಸಿಕೊಳ್ಳಲು ಮೂಸ್ ವಾಲಾನನ್ನು ಕೊಂದಿರುವುದಾಗಿ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದ.