ಹೊಸದಿಗಂತ ವರದಿ ಮೈಸೂರು:
ಯುವ ಸಮೂಹಗಳ ಆಕರ್ಷಣೆಯಾದ ಯುವ ದಸರಾದ ಕೊನೆಯ ದಿನದಂದು ಮಹಾರಾಜ ಕಾಲೇಜಿನ ಮೈದಾನದಲ್ಲಿ ಗಾಯಕ ಬೆನ್ನಿ ದಯಾಳ್ ಸುಮಮಧುರ ಗಾನಕ್ಕೆ ಹಾಗೂ ನೃತ್ಯಕ್ಕೆ ಯುವ ಸಮೂಹ ಮೈ ಮನ ಮರೆತು ಕುಣಿದು ಕುಪ್ಪಳಿಸಿದರು. ಬಾಲಿವುಡ್ ಹಾಡುಗಳಿಗೆ ರೋಮಾಂಚನಗೊಂಡ ಯುವ ಸಮೂಹವೂ ಕೂಡ ಆನಂದದಿಂದ ಶಿಳ್ಳೆ ಚಪ್ಪಾಳೆಗಳ ಮೂಲಕ ಹೆಜ್ಜೆ ಹಾಕಿದರು.
ಸಂವಿಧಾನವೇ ಶ್ರೇಷ್ಠ ಗ್ರಂಥ. ಆ ಗ್ರಂಥದ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ಸಿಗುತ್ತಿದೆ. ಸ್ತ್ರೀ ಸಮಾನತೆಗಾಗಿ ಹೋರಾಟ ನಡೆಸಿದ ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜೀವನದ ಸಾಹಸ ಗಾಥೆಗಳನ್ನು ತಮ್ಮ ಅಮೋಘ ನೃತ್ಯದ ಮೂಲಕ ಮಹಾರಾಜ ಕಾಲೇಜಿನ ವಿದ್ಯಾರ್ಥಿ ತಂಡದವರು ತಿಳಿಸಿದರು.
ಛಾಯದೇವಿ ಬಿ.ಎಡ್ ಕಾಲೇಜ್ ವಿದ್ಯಾರ್ಥಿಗಳ ತಂಡದವರು ಬಾಲ ಕೃಷ್ಣನ ತುಂಟಾಟಗಳನ್ನು ಹಾಗೂ ರಾಧ ಕೃಷ್ಣ ಅವರ ಪ್ರೇಮ ಕಥನವನ್ನು ತಮ್ಮ ಅಮೋಘ ನೃತ್ಯದ ಮೂಲಕ ರಂಜಿಸಿದರೆ, ಗೋಪಾಲ ಸ್ವಾಮಿ ಶಿಶುವಿಹಾರ ಕಾಲೇಜಿನ ವಿದ್ಯಾರ್ಥಿಗಳು ರಾಧೆ ರಾಧೆ ಹೊ ರಾಧೆ ಶ್ಯಾಮ್ ಹಾಡಿಗೆ ಹಜ್ಜೆ ಹಾಕಿ ಕಾಳಿಂಗ ಮರ್ಧನ ಮಾಡಿ ಕೃಷ್ಣನ ದಶಾವತರಗಳನ್ನು ಯುವ ಸಮೂಹಗಳನ್ನ ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದರು.
ವಾಣಿವಿಲಾಸ ಅರಸು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಗೂ ವರಾಹ ರೂಪಂ ಹಾಡಿಗೆ ಮನಮೋಹಕವಾಗಿ ನರ್ತಿಸುವ ಮೂಲಕ ಕರವಾಳಿ ನಾಡಿನ ನೃತ್ಯ ವೈಭವನ್ನು ಪ್ರೇಕ್ಷಕರ ಕಣ್ಣಮುಂದೆ ಅದ್ಭುತವಾಗಿ ಪ್ರಸ್ತುತ ಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಯೋಗ ತರಬೇತಿ ವಿದ್ಯಾರ್ಥಿಗಳ ತಂಡ ಏಕದಂತಾಯ ವಕ್ರತುಂಡಯಾ ಹಾಡಿಗೆ ಯೋಗದ ವಿವಿಧ ಭಂಗಿಗಳ ಮೂಲಕ ಉತ್ತಮ ಆರೋಗ್ಯಕ್ಕಾಗಿ ಯೋಗಾಸನದ ಮಹತ್ವವನ್ನು ಸಾರಿದರು. ಕೊಡಗಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ನೃತ್ಯದ ಸೊಬಗನ್ನು ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.
ಡ್ಯಾನ್ಸ್ ಫೈ.ಸಿಕ್ಸ್.ಸೆವೆನ್.ಯೈಟ್ (5678) ತಂಡದವರು ತಮ್ಮ ನೃತ್ಯದ ಮೂಲಕ ಅಗ್ರಪೂಜಿತ ಗಣೇಶನನ್ನು ಸ್ಮರಿಸಿ ನರ್ತಿಸಿದರೆ, ಡ್ಯಾನ್ಸ್ ಕ್ಲಾಸ್ ಮೈಸೂರು ತಂಡದವರು ಉಪೇಂದ್ರ ಅಭಿನಯದ ಕಬ್ಜಾ ಚಿತ್ರದ ಹಾಡಿಗೆ ಹಾಗೂ ಯುವ ರತ್ನ ಚಿತ್ರದ ಫೀಲ್ ದ ಪವರ್ ಹಾಡಿಗೆ ಹೆಜ್ಜೆ ಹಾಕಿ ಯುವ ಸಮೂಹಗಳನ್ನು ರಂಜಿಸಿ ಕುಣಿಯುವಂತೆ ಮಾಡಿದರು.